ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದಲ್ಲಿ ಮತ್ತೊಂದು ಚಿರತೆ ಸಿಕ್ಕಿಬಿದ್ದಿದೆ. ನರಸಿಂಹಸ್ವಾಮಿ ದೇವಸ್ಥಾನದ 7ನೇ ಮೈಲಿ ಕಾಲುದಾರಿಯ ಬಳಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿನಲ್ಲಿ ಚಿರತೆ ಸಿಕ್ಕಿಬಿದ್ದಿದೆ. ಎರಡು ತಿಂಗಳ ಅವಧಿಯಲ್ಲಿ ತಿರುಮಲ ನಡಿಗೆ ದಾರಿಯಲ್ಲಿ ಈಗಾಗಲೇ ನಾಲ್ಕು ಚಿರತೆಗಳನ್ನು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.
ಗುರುವಾರ ಬೆಳ್ಳಂಬೆಳಗ್ಗೆ ಬೋನಿಗೆ ಐದನೇ ಚಿರತೆ ಬಿದ್ದಿದೆ. ನಾಲ್ಕು ದಿನಗಳ ಹಿಂದೆ ಟಿಟಿಡಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ವಾಕ್ವೇನಲ್ಲಿ ವ್ಯವಸ್ಥೆ ಮಾಡಿದ್ದ ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಚಿರತೆ ಚಲನವಲನವನ್ನು ಗಮನಿಸಿದ್ದರು. ಅದನ್ನು ಸೆರೆಹಿಡಿಯಲು ಆ ಮಾರ್ಗದ ಹಲವೆಡೆ ಬೋನುಗಳನ್ನು ಹಾಕಲಾಗಿತ್ತು. ನಿರೀಕ್ಷೆಯಂತೆಯೇ ಇಂದು ಬೋನಿಗೆ ಚಿರತೆ ಸಿಕ್ಕಿದೆ.
ಕಳೆದ ತಿಂಗಳು ನೆಲ್ಲೂರು ಜಿಲ್ಲೆಯ ಆರು ವರ್ಷದ ಬಾಲಕಿ ತಿರುಮಲ ಬೆಟ್ಟಕ್ಕೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಲಿಪಿರಿಯಲ್ಲಿ ಚಿರತೆಯೊಂದು ದಾಳಿ ಮಾಡಿ ಕೊಂದು ಹಾಕಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ತಿರುಮಲ ಬೆಟ್ಟದ ಹಲವೆಡೆ ಬೋನುಗಳನ್ನು ಹಾಕಿದ್ದಾರೆ. ಇದರೊಂದಿಗೆ ಪಾದಚಾರಿ ಮಾರ್ಗದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.