ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಚುನಾವಣಾ ಕ್ಷೇತ್ರದಿಂದ ನಾನು ನಿವೃತ್ತಿಯಾಗಿದ್ದು, ಇನ್ಮುಂದೆ ಯಾವುದೇ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ನಾನು ಹಿಂದೆ ಸರಿದು ಮಗನಿಗೆ ಅವಕಾಶ ಕಲ್ಪಿಸಿ ಕೊಡುತ್ತೇನೆ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಘೋಷಿಸಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ಮಗನಿಗೆ ಅವಕಾಶ ಕಲ್ಪಿಸುವಂತೆ ಪಕ್ಷದ ಹೈಕಮಾಂಡ್ನಿಂದಲೇ ಸೂಚನೆ ಬಂದಿದೆ. ಅದರಂತೆ ನಾನು ನಡೆದುಕೊಳ್ಳುತ್ತೇನೆ.
1972ರಿಂದ ರಾಜಕೀಯದಲ್ಲಿ ಐದು ದಶಕಗಳ ಕಾಲ ಸಕ್ರಿಯ ರಾಜಕಾರಣ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಸಮಕಾಲೀನರು. ಸಿದ್ದರಾಮಯ್ಯ ನನಗಿಂತ 11 ವರ್ಷ ಕಿರಿಯರು, ಶಿವಕುಮಾರ್ ಇನ್ನೂ ಕಿರಿಯ. ನಾನು, ಖರ್ಗೆ, ವೀರಪ್ಪ ಮೊಯ್ಲಿ ಹಿರಿಯ ನಾಯಕರು. ಪಕ್ಷ ಬಯಸಿದರೆ ಲೋಕಸಭೆ ಮತ್ತು ರಾಜ್ಯಸಭೆಗೆ ಸ್ಪರ್ಧಿಸುವುದಾಗಿ ತಿಳಿಸಿದರು.
ಇದೇ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ತಮ್ಮ ಮಗನಿಗಾಗಿ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ವಿಜಯೇಂದ್ರ ಪರಿಷತ್ಗೆ ಪ್ರಯತ್ನಿಸಿದರೂ ಆಗಲಿಲ್ಲ. ಈಗ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಯಾವ ರೀತಿ ಸ್ಪಂದಿಸುತ್ತದೆ ಎಂಬುವುದು ಅವರಿಗೆ ಬಿಟ್ಟ ವಿಚಾರ ಎಂದರು.
ನಮ್ಮ ನಾಯಕರಿಗೆ ಪಕ್ಷಕ್ಕೆ ಮಾರಕವಾಗುವಂತಹ ರೀತಿಯಲ್ಲಿ ಒಬ್ಬರಿಗೊಬ್ಬರು ಕಚ್ಚಾಡುವುದನ್ನು ಕೈಬಿಡಿ ಎಂದು ಸಲಹೆ ನೀಡುತ್ತೇನೆ. ಪಕ್ಷದ ಹಿತಕ್ಕಾಗಿ ಕೆಲಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಯತ್ನ ಮಾಡೋಣ. ಬಿಜೆಪಿ ನಾಯಕರು, ನಮ್ಮ ನಾಯಕರ ಹೇಳಿಕೆಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಆ ರೀತಿ ಅವಕಾಶ ಕಲ್ಪಿಸಿಕೊಡದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.