ಮಧ್ಯಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ: ವ್ಯಕ್ತಿಗೆ ಮಲ ಬಳಿದು ನಿಂದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರತಿದಿನ ಮನುಷ್ಯರ ಮೇಲೆ ನಡೆಯುವ ಪೈಶಾಚಿಕ ಕೃತ್ಯಗಳು ಮಾನವ ಕುಲವನ್ನು ತಲೆತಗ್ಗಿಸುವಂತೆ ಮಾಡುತ್ತಿವೆ. ಮೊನ್ನೆಯಷ್ಟೇ ಮಹಿಳೆಯರನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ಮಾಡಿದ್ದ ಘಟನೆ ಮರೆಯುವ ಮುನ್ನವೇ ಮತ್ತೊಬ್ಬ ವ್ಯಕ್ತಿಗೆ ಮಲ ಬಳಿದು ಅವಮಾನಿಸಿದ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಛತ್ತರ್‌ಪುರ ಜಿಲ್ಲೆಯ ಬಿಕೌರಾ ಗ್ರಾಮದಲ್ಲಿ ದಶರತ್ ಅಹಿರ್ವಾರ್ ಎಂಬುವವರ ದೇಹ, ತಲೆ ಮತ್ತು ಮುಖಕ್ಕೆ ಮಾನವ ಮಲವನ್ನು ಬಳಿದು ಹೇಯ ಕೃತ್ಯ ಎಸಗಿದ್ದಾರೆ.

ಘಟನೆ ಸಂಬಂಧ ಎಸ್‌ಸಿ ಮತ್ತು ಎಸ್‌ಟಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಮಕೃಪಾಲ್ ಪಟೇಲ್‌ನನ್ನು ಬಂಧಿಸಲಾಗಿದೆ. ಈ ಘಟನೆ ರಾಜ್ಯದಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ಹಿಂಸಾಚಾರದ ಬಗ್ಗೆ ಕಳವಳಕ್ಕೆ ಕಾರಣವಾಯಿತು. ಶುಕ್ರವಾರ ನಡೆದ ಘಟನೆಯ ಬಗ್ಗೆ ದೂರು ನೀಡಲು ಸಂತ್ರಸ್ತ ದಶರತ್ ಅಹಿರ್ವಾರ್ ಶನಿವಾರ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಘಟನೆಗೆ ಕಾರಣವೇನು?

ಬಿಕೌರ ಗ್ರಾಮದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ ಪಕ್ಕದ ಕೈಪಂಪ್‌ನಲ್ಲಿ ಸ್ನಾನ ಮಾಡುತ್ತಿದ್ದ ಆರೋಪಿ ರಾಮಕೃಪಾಲ್ ಪಟೇಲ್‌ಗೆ ಕಾಮಗಾರಿಗೆ ಬಳಸಿದ್ದ ಗ್ರೀಸ್ ಆಕಸ್ಮಿಕವಾಗಿ ತಗುಲಿದೆ. ಇದರಿಂದ ಕೋಪಗೊಂಡ ರಾಮಕೃಪಾಲ್ ಪಟೇಲ್ ಸ್ನಾನದ ಬಟ್ಟಲಿನಲ್ಲಿ ಮಲ ತಂದು ಕಾಮಗಾರಿ ಕೆಲಸದಲ್ಲಿ ನಿರತನಾಗಿದ್ದ ದಶರತ್ ತಲೆ, ಮುಖ ಹಾಗೂ ದೇಹಕ್ಕೆ ಬಳಿದು ಮನಬಂದಂತೆ ನಿಂದಿಸಿದ್ದಾರೆ.

ತನ್ನ ಮೇಲೆ ಮಲ ಬಳಿದು ಜಾತಿನಿಂದನೆ ಮಾಡಿದ್ದಾರೆ ಎಂದು ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಪಂಚಾಯಿತಿ ಮಾಡುವಂತೆ ಸ್ಥಳೀಯ ಹಿರಿಯರನ್ನು ಕೇಳಿದಾಗ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ 600 ರೂ.ದಂಡ ವಿಧಿಸಿ ಆರೋಪಿಯನ್ನು ಬಚಾವ್‌ ಮಾಡಿದ್ದಾಗಿ ದಶರಥ್ ದೂರಿನಲ್ಲಿ ಉಲ್ಲೇಖಿಸಿದರು. ಆರೋಪಿ ರಾಮಕೃಪಾಲ್ ಪಟೇಲ್ ವಿರುದ್ಧ ಐಪಿಸಿ ಮತ್ತು ಎಸ್‌ಸಿಎಸ್‌ಟಿ ಅಟ್ರಾಸಿಟಿ ಕಾಯ್ದೆಗಳ ಸೆಕ್ಷನ್ 294, 506 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಮನಮೋಹನ್ ಸಿಂಗ್ ಬಾಘೇಲ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!