ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿ ಕೇರಳ ಸ್ಟೋರಿ ಸಿನಿಮಾ ನೀಡಿದ ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಆ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸಿನಿಮಾ ಮಾಡುವುದಕ್ಕೆ ಅಣಿಯಾಗಿದ್ದಾರೆ. ಆದರೆ ಈ ಬಾರಿ ನೈಜ ಕಥೆಯಲ್ಲ, ಜೀವನ ಚರಿತ್ರೆಯನ್ನೇ ಮಾಡುತ್ತಿದ್ದಾರೆ.
ಭಾರತದ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರಾದ ಸುಬ್ರತಾ ರಾಯ್ ಅವರು ಜೂನ್ 10ರಂದು ತಮ್ಮ 75ನೇ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ. ಆ ವೇಳೆಯೇ ಸುದೀಪ್ತೋ ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಸುದೀಪ್ತೋ ಅವರು ಸುಬ್ರತಾ ರಾಯ್ ಅವರ ಜೀವನ ಕಥೆಯನ್ನೇ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.
ನಿರ್ಮಾಪಕರಾಗಿರುವ ಸಂದೀಪ್ ಸಿಂಗ್ ಮತ್ತು ಜಯಂತಿಲಾಲ್ ಗಡ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ. ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕರಾಗಿರುವ ಸುಬ್ರತಾ ಅವರ ಜೀವನ ಚರಿತ್ರೆಯುಳ್ಳ ಸಿನಿಮಾಕ್ಕೆ ‘ಸಹಾಶ್ರೀ’ ಎಂದು ಹೆಸರಿಡಲಾಗಿದೆ.
ಸಿನಿಮಾ ಘೋಷಣೆಯಾಗುತ್ತಿದ್ದಂತೆಯೇ ಸಿನಿಮಾದಲ್ಲಿ ಸುಬ್ರತಾ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿವೆ. ಅದಕ್ಕೆಂದು ಸೂಪರ್ ಸ್ಟಾರ್ ನಟರನ್ನು ಪರಿಗಣಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಯಾರು ತೆರೆಯ ಮೇಲೆ ಸುಬ್ರತಾ ರಾಯ್ ಆಗಿ ಮಿಂಚಲಿದ್ದಾರೆ ಎನ್ನುವ ವಿಚಾರ ಇನ್ನು ಕೆಲವು ದಿನಗಳಲ್ಲಿ ಹೊರಬೀಳಲಿದೆ.