ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ರೈಲು ಅಪಘಾತದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಬಹನಾಗ ಬಜಾರ್ ನಿಲ್ದಾಣದ ಲಾಗ್ ಬುಕ್, ರಿಲೇ ಪ್ಯಾನಲ್ ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡ ನಂತರ ನಿಲ್ದಾಣವನ್ನು ಸೀಲ್ ಮಾಡಲಾಗಿದ್ದು, ಯಾವುದೇ ರೈಲು ನಿಲ್ಲುವುದಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಅಪ್ ಮತ್ತು ಡೌನ್ ಲೈನ್ ಎರಡನ್ನೂ ಮರುಸ್ಥಾಪಿಸಿದ ನಂತರ, ಕನಿಷ್ಠ ಏಳು ರೈಲುಗಳು ಬಹನಾಗಾ ಬಜಾರ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದವು.
ಇದೀಗ ಲಾಗ್ ಬುಕ್, ರಿಲೇ ಪ್ಯಾನಲ್ ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡ ನಂತರ ಸಿಬಿಐ ಬಹನಾಗ ಬಜಾರ್ ರೈಲು ನಿಲ್ದಾಣವನ್ನು ಸೀಲ್ ಮಾಡಿದೆ ಎಂದು ಆಗ್ನೇಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಆದಿತ್ಯ ಕುಮಾರ್ ಚೌಧರಿ ಅವರು ಹೇಳಿದ್ದಾರೆ.
‘ಸಿಗ್ನಲಿಂಗ್ ವ್ಯವಸ್ಥೆಗೆ ಸಿಬ್ಬಂದಿಗಳ ಪ್ರವೇಶ ನಿಷೇಧಿಸುವ ರಿಲೇ ಇಂಟರ್ಲಾಕಿಂಗ್ ಪ್ಯಾನೆಲ್ ಅನ್ನು ಬಂದ್ ಮಾಡಲಾಗಿದೆ. ಮುಂದಿನ ಸೂಚನೆವರೆಗೆ ಯಾವುದೇ ಪ್ರಯಾಣಿಕರ ಅಥವಾ ಸರಕು ರೈಲು ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ ನಿಲ್ಲುವುದಿಲ್ಲ’ಎಂದು ಚೌಧರಿ ತಿಳಿಸಿದ್ದಾರೆ.