ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಸೇನೆ (ಯುಬಿಟಿ) ಪಕ್ಷದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಬಂಡಾಯದ ಹಾದಿ ಹಿಡಿದಿರುವ ಕೆಲ ಸಂಸದರ ವಿರುದ್ಧ ಪಕ್ಷದ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷ ತೊರೆದು ಏಕನಾಥ್ ಶಿಂಧೆ ಬಣದತ್ತ ಮುಖ ಮಾಡುತ್ತಿರುವವರನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
ಬಂಡಾಯ ಸಂಸದರಿಗೆ ಕೋಟಿ ಕೋಟಿ ಆಮಿಷದ ಆರೋಪ
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾವತ್, ಕೆಲ ಸಂಸದರಿಗೆ ಭಾರೀ ಹಣದ ಆಮಿಷ ನೀಡಲಾಗಿದೆ ಎಂದು ಆರೋಪಿಸಿದರು. ಈಗಾಗಲೇ ಆರ್ಥಿಕ ಲಾಭ ಪಡೆದಿದ್ದ ಅವರಿಗೆ ಮತ್ತಷ್ಟು ಹಣ ನೀಡಲಾಗಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:
ರಾಜೀನಾಮೆ ನೀಡಿ ಜನರ ತೀರ್ಪು ಪಡೆಯಲಿ: ರಾವತ್ ಸವಾಲು
ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ಶ್ರಮಪಟ್ಟಿದ್ದಾರೆ. ಆದ್ದರಿಂದ ಪಕ್ಷ ಬದಲಾಯಿಸುವ ನಿರ್ಧಾರ ಕೈಗೊಂಡವರು ನೈತಿಕ ಹೊಣೆ ಹೊತ್ತು ಮೊದಲು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಜನರ ವಿಶ್ವಾಸ ಪಡೆಯಲಿ ಎಂದು ಅವರು ಸವಾಲು ಹಾಕಿದರು.
ಇದೇ ವೇಳೆ, ಬಂಡಾಯಕ್ಕೆ ಮುಂದಾದ ನಾಯಕರ ವಿರುದ್ಧ ಪಕ್ಷದಿಂದ ವಿಶೇಷ ರಾಜಕೀಯ ಕಾರ್ಯತಂತ್ರ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ ರಾವತ್, ಸಂಸದರಿಗೆ ಒದಗಿಸಿರುವ ಹೆಚ್ಚುವರಿ ಭದ್ರತೆಯನ್ನೂ ಹಿಂಪಡೆಯಬೇಕು ಎಂದು ಆಗ್ರಹಿಸಿದರು.



