ಹೊಸದಿಗಂತ ವರದಿ, ಮೈಸೂರು:
ಇತ್ತೀಚೆಗಷ್ಟೇ ತಾಯಿ ಸಾವಿನಿಂದಾಗಿ ತಬ್ಬಲಿಯಾಗಿರುವ ಮೂರು ಮರಿ ಹುಲಿಗಳ ಪೈಕಿ ಗಂಡು ಮರಿ ಹುಲಿಯೊಂದು ಮತ್ತೊಂದು ಹುಲಿಯೊಂದರ ದಾಳಿಯಿಂದ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ನಾಗರಹೊಳೆಯ ಅಂತರಸನೆಂತೆ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ತಾರಕ ಅರಣ್ಯದಲ್ಲಿ ನಡೆದಿದೆ.
ಇತ್ತೀಚೆಗೆ ತಾಯಿ ಹುಲಿಯೊಂದು ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು. ಇದರಿಂದಾಗಿ ಅದರ ಮೂರು ಹುಲಿಗಳು ತಬ್ಬಲಿಯಾಗಿದ್ದವು. ಅವುಗಳ ರಕ್ಷಣೆಗೆ ಅರಣ್ಯ ಇಲಾಖೆಯವರು ಕೂಬಿಂಗ್ ಕಾರ್ಯಚರಣೆ ನಡೆಸಿದ್ದರು. ಆದರೆ ಮೂರು ಮರಿ ಹುಲಿಗಳು ಪತ್ತೆಯಾಗಿರಲಿಲ್ಲ. ಈ ಹಿನ್ನಲೆಯಲ್ಲಿ ತಾಯಿ ಹುಲಿ ಸತ್ತಿದ್ದ ಸ್ಥಳ ಹಾಗೂ ಆಸುಪಾಸಿನಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಹದ್ದಿನ ಕಣ್ಣಿಡಲಾಗಿತ್ತು.
ಈ ವೇಳೆ ಈ ಮೂರು ಮರಿ ಹುಲಿಗಳು ಜಿಂಕೆಯೊoದನ್ನು ಬೇಟೆಯಾಡಿ ಕೊಂದು ತಿಂದಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದನ್ನು ನೋಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮರಿ ಹುಲಿಗಳು ಬೇಟೆಯಾಡುವ ಸಾಮಾರ್ಥ್ಯ ಬೆಳೆಸಿಕೊಂಡಿರುವುದರಿoದ, ಇನ್ನು ಅದರ ಕಾಳಜಿಯ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಕೊಂಡಿದ್ದರು. ಆದರೆ ಇದೀಗ ಅದೇ ಕ್ಯಾಮೆರಾದಲ್ಲಿ ಗಂಡು ಹುಲಿಯೊಂದರ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆ ನಡೆಸಿದಾಗ, ಮತ್ತೊಂದು ಹುಲಿಯ ದಾಳಿಯಿಂದ ಮರಿ ಗಂಡು ಹುಲಿಯ ಕುತ್ತಿಗೆ, ಭುಜದ ಬಳಿ ತೀವ್ರವಾಗಿ ಗಾಯಗಳಾಗಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಬಳಿಕ ಗಂಡು ಮರಿ ಹುಲಿಯ ಶವದ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.