ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಹಿಂಗ್ಯಾ ನಿರಾಶ್ರಿತರಿಗೆ ವಸತಿ ನೀಡುವ ಕುರಿತು ಕೇಂದ್ರ ಸರ್ಕಾರವು ಹೊಸ ನಿರ್ಧಾರವನ್ನು ಕೈಗೊಂಡಿದ್ದು ಈ ನಿರ್ಧಾರವನ್ನು ಹರ್ದೀಪ್ ಸಿಂಗ್ ಪುರಿ ಶ್ಲಾಘಿಸಿದ್ದಾರೆ. “ವಲಸೆ ಬಂದ ರೋಹಿಂಗ್ಯಾಗಳಿಗೆ ದೆಹಲಿಯ ಬಕ್ಕರ್ವಾಲಾ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ಮತ್ತು ಪೊಲೀಸ್ ರಕ್ಷಣೆ ಒದಗಿಸಲಾಗುವುದು” ಎಂದು ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
“ಭಾರತದ ನಿರಾಶ್ರಿತರ ನೀತಿಯನ್ನು ದುರುಪಯೋಗಪಡಿಸಿಕೊಂಡು ಸಿಎಎಯೊಂದಿಗೆ ಜೋಡಿಸಿ ಅಪಪ್ರಚಾರ ಮಾಡುವವರಿಗೆ ಇದು ಅನ್ವಯವಾಗುವುದಿಲ್ಲ” ಎಂದು ಅವರು ಉಲ್ಲೇಖಿಸಿದ್ದಾರೆ.
“ದೇಶದಲ್ಲಿ ಆಶ್ರಯ ಪಡೆದವರನ್ನು ಭಾರತ ಯಾವಾಗಲೂ ಸ್ವಾಗತಿಸುತ್ತದೆ. ಒಂದು ಮಹತ್ವದ ನಿರ್ಧಾರದಲ್ಲಿ ಎಲ್ಲಾ ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಬಕ್ಕರ್ವಾಲಾ ಪ್ರದೇಶದ EWS ಫ್ಲಾಟ್ಗಳಿಗೆ ಸ್ಥಳಾಂತರಿಸಲಾಗುವುದು. ಅವರಿಗೆ ಮೂಲಭೂತ ಸೌಕರ್ಯಗಳು, UNHCR ID ಗಳು ಮತ್ತು ರಾತ್ರಿಯಿಡೀ ರಕ್ಷಣೆಗೆಂದು ದೆಹಲಿ ಪೊಲೀಸರನ್ನು ಒದಗಿಸಲಾಗುತ್ತದೆ.” ಎಂದು ಸಚಿವರು ಹೇಳಿದ್ದಾರೆ.
“ಭಾರತವು 1951ರ UN ನಿರಾಶ್ರಿತರ ಸಮಾವೇಶವನ್ನು ಗೌರವಿಸುತ್ತದೆ ಮತ್ತು ಅನುಸರಿಸುತ್ತದೆ ಮತ್ತು ಅವರ ಜನಾಂಗ, ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಆಶ್ರಯ ನೀಡುತ್ತದೆ” ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.