ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಮತ್ತು ಸಂಸ್ಕೃತ ಇಲಾಖೆಯಡಿ ಬರುವ ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ನೂತನ ಅಧ್ಯಕ್ಷರು ಮತ್ತು ಸದಸ್ಯರಗಳನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದಿಂದ ರಚಿಸಲ್ಪಟ್ಟ 21 ಟ್ರಸ್ಟ್, ಪ್ರತಿಷ್ಠಾನಗಳಿಗೆ ಅಧ್ಯಕ್ಷರು, ಸದಸ್ಯರ ಅಧಿಕಾರಾವಧಿ ಮುಕ್ತಾಯಗೊಂಡಿರುವ ಹಿನ್ನಲೆಯಲ್ಲಿ, ಕನ್ನಡ ಮತ್ತು ಸಂಸ್ಕತಿ ಇಲಾಖೆಯಡಿಯ ಕೆಲ ಟ್ರಸ್ಟ್, ಪ್ರತಿಷ್ಠಾನಗಳಿಗೆ ಹೊಸದಾಗಿ ಅಧ್ಯಕ್ಷರು, ಸದಸ್ಯರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಮುಖವಾಗಿ ಶ್ರೀಗಳನಾಥ್ ಮತ್ತು ನಾ ಶ್ರೀ ರಾಜಪುರೋಹಿತ ಪ್ರತಿಷ್ಠಾನಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಆದ್ರೆ, ಇದನ್ನು ಚಕ್ರವರ್ತಿ ಸೂಲಿಬೆಲೆ ಅವರು ತಿಸ್ಕರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಗಳಗನಾಥರ ಕುರಿತಂತೆ ಅಪಾರ ಗೌರವ ಹೊಂದಿರುವ ನನಗೆ, ನನ್ನನ್ನು ಗಳಗನಾಥ ಮತ್ತು ರಾಜ ಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಅಚ್ಚರಿಯೂ ಮತ್ತು ಸಂತಸವೂ ಆಯ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಸಮಯ ಕೊಡುವಷ್ಟು ಪುರಸೊತ್ತಿಲ್ಲದಿರುವುದರಿಂದ ಅತ್ಯಂತ ವಿನೀತನಾಗಿಯೇ ಈ ಗೌರವವನ್ನು ಮರಳಿಸಬೇಕಾಗಿ ಬಂದಿದೆ. ಗಳಗನಾಥರ ಕುರಿತಂತೆ ನನ್ನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪ್ರೀತ್ಯಾದರಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳು ನನ್ನ ದೃಷ್ಟಿಯಲ್ಲಿದ್ದಾರೆ. ಸಂಬಂಧಪಟ್ಟವರಿಗೆ ಅದನ್ನು ತಿಳಿಸುವೆ. ಸೂಕ್ತವೆನಿಸಿದರೆ ಅವರನ್ನು ಆಯ್ಕೆ ಮಾಡಬಹುದು.
ಗಳಗನಾಥರ ಕನ್ನಡ ಸೇವೆಗೆ ನಾವೆಷ್ಟು ಋಣಿಯಾದರೂ ಕಡಿಮೆಯೇ. ಅವರ ಕೆಲಸ ಮಾಡುವ ಈ ಅವಕಾಶ ಸ್ವೀಕರಿಸಲಾಗದಿರುವುದಕ್ಕೆ ಖಂಡಿತವಾಗಿಯೂ ಖೇದವಿದೆ. ನನ್ನನ್ನು ಸೂಕ್ತವೆಂದು ಆಯ್ಕೆ ಮಾಡಿದವರಿಗೆ ಧನ್ಯವಾದಗಳು ಎಂದಿದ್ದಾರೆ.