ಹೊಸದಿಗಂತ ವರದಿ ವಿಜಯಪುರ:
ಉತ್ತರ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಿಸಲು ಹಾಗೂ ಸಮಗ್ರ ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಆಶ್ರಯದೊಂದಿಗೆ, ಏ.13 ರಿಂದ ಏ.17 ರ ವರೆಗೆ ಕೃಷ್ಣಾ- ಮಹದಾಯಿ- ನವಲಿ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ, ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ ಅಧ್ಯಕ್ಷ ಎಸ್.ಆರ್.ಪಾಟೀಲ್ ಹೇಳಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂಕಲ್ಪ ಯಾತ್ರೆ ಜಾತ್ಯತೀತ, ಧರ್ಮಾತೀತ ಪಕ್ಷಾತೀತವಾಗಿದ್ದು, 200 ಟ್ರ್ಯಾಕ್ಟರಗಳ ಮೂಲಕ ಬೃಹತ್ ಜಾಥಾ ನಡೆಯಲಿದೆ ಎಂದರು. ಏ.13 ರಂದು ರೈತ ಬಂಡಾಯದ ನೆಲವಾದ ಗದಗ ಜಿಲ್ಲೆಯ ನರಗುಂದ ಪಟ್ಟಣದಿಂದ ಜಾಥಾ ಆರಂಭಗೊಂಡು, ವಿವಿಧ ಗ್ರಾಮ, ಪಟ್ಟಣಗಳ ಮೂಲಕ ಬೀಳಗಿ ತಾಲೂಕಿನ ಬಾಡಗಂಡಿಗೆ ತಲುಪಲಿದ್ದು, ಏ.17 ರಂದು ಬಾಪೂಜಿ ಅಂತಾರಾಷ್ಟ್ರೀಯ ಶಾಲಾ ಮೈದಾನದಲ್ಲಿ ಸಮಾವೇಶದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗಾಗಿ ನೆನೆಗುದಿಗೆ ಬಿದ್ದಿರುವ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3, ಮಹಾದಾಯಿ ಯೋಜನೆ, ನವಲಿ ಯೋಜನೆಗಳನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸಲು ರಾಜ್ಯದ ಬಜೆಟ್ ನಲ್ಲಿ ಶೇ.15 ರಷ್ಟು ಹಣವನ್ನು ಪ್ರತಿವರ್ಷ ವೆಚ್ಚ ಮಾಡಬೇಕು ಎಂದು ಒತ್ತಾಯಿಸಿದರು.