July 5, 2026
Sunday, July 5, 2026
spot_img

ನಿಮ್ಮ ಮನೆಗೆ ಬರ್ತಿರೋ ಬಟಾಣಿ ಅಸಲಿಯೇ? ಮೈಸೂರು ತರಕಾರಿ ಮಾರ್ಕೆಟ್‌ನಲ್ಲಿ ಶಾಕಿಂಗ್ ದಂಧೆ ಬಯಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರ್ವಜನಿಕರನ್ನು ಸೆಳೆಯಲು ಒಣಗಿದ ಬಟಾಣಿಗೆ ಅಪಾಯಕಾರಿ ಕೆಮಿಕಲ್ ಬಣ್ಣ ಹಚ್ಚಿ ಮಾರುತ್ತಿದ್ದ ಜಾಲವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (FSSAI) ಪತ್ತೆಹಚ್ಚಿದೆ. ಮೈಸೂರಿನ ಹೆಸರಾಂತ ಎಂ.ಜಿ. ರಸ್ತೆ ಹೋಲ್‌ಸೇಲ್ ವೆಜಿಟೇಬಲ್ ಮಾರ್ಕೆಟ್‌ನಲ್ಲಿ ಶನಿವಾರ ಮುಂಜಾನೆ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ, ಸುಮಾರು 106 ಕೆಜಿ ತೂಕದ ಕೃತಕ ಬಣ್ಣದ ಬಟಾಣಿಯನ್ನು ವಶಪಡಿಸಿಕೊಂಡಿದ್ದಾರೆ.

ಮುಂಜಾನೆ 4:30ಕ್ಕೆ ಶಾಕ್ ಕೊಟ್ಟ ಅಧಿಕಾರಿಗಳು

ಇಲಾಖೆಯ ನಿಯೋಜಿತ ಅಧಿಕಾರಿ ಎಸ್‌.ಎಲ್. ರವೀಂದ್ರ ಅವರ ಮಾರ್ಗದರ್ಶನದಲ್ಲಿ ಶನಿವಾರ ನಸುಕಿನ ಜಾವ 4.30ಕ್ಕೆ ತರಕಾರಿ ಮಾರುಕಟ್ಟೆ ಮೇಲೆ ದಾಳಿ ಮಾಡಲಾಯಿತು. ಈ ವೇಳೆ ಆರು ಜನ ವ್ಯಾಪಾರಿಗಳು ಒಣ ಬಟಾಣಿಗೆ ರಾಸಾಯನಿಕ ಮಿಶ್ರಿತ ಹಸಿರು ಬಣ್ಣ ಹಚ್ಚಿ ನಕಲಿ ತಾಜಾತನ ಸೃಷ್ಟಿಸುತ್ತಿರುವುದು ದೃಢಪಟ್ಟಿದೆ. ಈ ಮಾರುಕಟ್ಟೆಯಲ್ಲಿ ಇಂತಹ ದಂಧೆ ಹತ್ತಿಕ್ಕಲು ನಡೆದ ಮೂರನೇ ಪ್ರಮುಖ ದಾಳಿ ಇದಾಗಿದೆ.

ಲ್ಯಾಬ್‌ ಟೆಸ್ಟ್‌ಗೆ ಸ್ಯಾಂಪಲ್ ರವಾನೆ

ವಶಪಡಿಸಿಕೊಂಡ ಬಟಾಣಿ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಯಾವ ಮಾರಕ ರಾಸಾಯನಿಕ ಬಳಸಲಾಗಿದೆ ಎಂಬುದು ವರದಿ ಬಂದ ಬಳಿಕ ತಿಳಿಯಲಿದೆ. ನಿಯಮ ಉಲ್ಲಂಘಿಸಿದ ವ್ಯಾಪಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಆರೋಗ್ಯ ಜಾಗೃತಿ ಮೂಡಿಸಿದ ಇಲಾಖೆ

ಲಾಭದ ಆಸೆಗೆ ಒಣ ಬಟಾಣಿಗಳನ್ನು ಹಸಿರು ತರಕಾರಿಯಂತೆ ಬಿಂಬಿಸಿ ಜನರಿಗೆ ದ್ರೋಹ ಎಸಗಲಾಗುತ್ತಿತ್ತು. ದಾಳಿಯ ಬೆನ್ನಲ್ಲೇ, ಮಾರುಕಟ್ಟೆಯ 25ಕ್ಕೂ ಹೆಚ್ಚು ವ್ಯಾಪಾರಿಗಳನ್ನು ಕರೆದು ಇಂತಹ ವಿಷಕಾರಿ ಬಣ್ಣಗಳ ಬಳಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅಧಿಕಾರಿಗಳು ಅರಿವು ಮೂಡಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !