ನೀರುಳ್ಳಿ ಅಥವಾ ಈರುಳ್ಳಿ ಒಂದು ಅದ್ಭುತ ಔಷಧೀಯ ಗುಣವುಳ್ಳ ಗಡ್ಡೆ. ಆಹಾರವಾಗಿಯೂ ಇದು ಬಳಕೆಯಾಗುತ್ತದೆ. ಭಾರತೀಯ ವೈದ್ಯಪದ್ದತಿಯಲ್ಲಿ ಇದು ಔಷಧಿಯಾಗಿಯೂ ಗುರುತಿಸಲ್ಪಟ್ಟಿದೆ. ಹಳ್ಳಿ ವೈದ್ಯಕೀಯದಲ್ಲಿ ಈರುಳ್ಳಿಗೆ ಪ್ರಮುಖ ಸ್ಥಾನವಿದೆ. ಆಹಾರದ ರುಚಿಯನ್ನು ಹೆಚ್ಚಿಸುವ ವಿಶೇಷ ಗುಣ ಈರುಳ್ಳಿಗೆ ಇದೆ. ಕಫ, ಕೆಮ್ಮು, ದಮ್ಮು, ಜ್ವರ ಇವೆಲ್ಲವನ್ನು ದೂರ ಮಾಡುವ ಅದ್ಭುತ ಶಕ್ತಿ ಈರುಳ್ಳಿಗೆ ಇದೆ. ಈರುಳ್ಳಿ ರಸವನ್ನು ಕೂದಲಿಗೆ ಹಚ್ಚುವುದರಿಂದ ಕೂದಲುದುರುವ ಸಮಸ್ಯೆಯಿಂದ ದೂರವಿರಬಹುದು. ಕೂದಲು ಕಾಂತಿಯುತವಾಗಿ ಕಾಣುತ್ತದೆ ಎನ್ನುತ್ತಾರೆ.
ಈರುಳ್ಳಿಯನ್ನು ಹುರಿದು ಸೇವಿಸುವುದರಿಂದ ಅನೇಕ ಲಾಭಗಳಿವೆ. ಹುರಿದ ಈರುಳ್ಳಿಯಲ್ಲಿ ಕ್ಯಾಲ್ಸಿಯಂ ಮತ್ತು ಫೋಲೇಟ್ನಂತಹ ಪೋಷಕಾಂಶಗಳು ಹೇರಳವಾಗಿರುತ್ತವೆ. ಇದರಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹಾರೋಗ್ಯವನ್ನು ವೃದ್ಧಿ ಮಾಡುತ್ತದೆ. ಈರುಳ್ಳಿಯನ್ನು ಸುಟ್ಟು ತಿನ್ನುವುದರಿಂದ ಮೂಳೆಗಳ ಆರೋಗ್ಯ ಹೆಚ್ಚುತ್ತದೆ. ದೇಹದಲ್ಲಿರುವ ಕ್ಯಾಲ್ಸಿಯಂ ಪ್ರಮಾಣವನ್ನು ಸರಿದೂಗಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸರಿಮಾಡುವುದಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ದೇಹದಲ್ಲಿರುವ ಟಾಕ್ಸಿನ್ ಅಂಶವನ್ನು ತೆಗೆದುಹಾಕಿ ದೇಹವನ್ನು ಆರೋಗ್ಯಪೂರ್ಣವಾಗಿ ಮಾಡುತ್ತದೆ.