ಹೊಸದಿಗಂತ ವರದಿ ಹಾವೇರಿ:
ಶರಣಬಸವ ಲಾ ಫರ್ಮ್, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಡಿ.24 ರಂದು ಇಲ್ಲಿನ ಹುಕ್ಕೇರಿಮಠ ಶಿವಲಿಂಗೇಶ್ವರ ಮಹಿಳ ಮಹಾವಿದ್ಯಾಲಯದ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಶರಣಬಸವ ಅಂಗಡಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಮಾತನಾಡಿದ ಅವರು, ಸುಮಾರು 30 ಕ್ಕಿಂತ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಇದರಲ್ಲಿ ಪಾಲ್ಗೊಂಡು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವ ಭರವಸೆ ನೀಡಿವೆ. ಕ್ಯೂಆರ್ ಕೋಡ್ ಬಳಸಿ ಸ್ಕ್ಯಾನ್ ಮಾಡಿ ನೋಂದಾಯಿಸಿಕೊಳ್ಳಬಹುದು. ನೋಂದಾಯಿಸಿಕೊಳ್ಳದೆ ಬಂದವರಿಗೂ ಸಹ ಪಾಲ್ಗೊಳ್ಳಲು ಅವಕಾಶವಿದೆ. ಈ ಮೇಳದಲ್ಲಿ ಸುಮಾರು 7-8 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಉದ್ಯೋಗ ಮೇಳದ ಕುರಿತು ಸಂಬಂಧಿಸಿದ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳ ಜತೆಗೂ ಸಮನ್ವಯ ಸಾಧಿಸಲಾಗಿದೆ. ಸಾದ್ಯವಾದಷ್ಟು ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಚಿಂತನೆ ಇದೆ. ಇದು ರಾಜಕೀಯ ರಹಿತವಾದ ಸೇವಾ ಕಾರ್ಯ ಎಂದು ಸ್ಪಷ್ಟಪಡಿಸಿದ ಅವರು ಉದ್ಯೋಗ ಮೇಳದ ನಂತರವೂ ಉದ್ಯೋಗ ಭರವಸೆ ನೀಡಿದ ಸಂಸ್ಥೆಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಮಧ್ಯ ಸೇತುವೆಯಾಗಿ ಕೆಲಸ ಮಾಡಲಿದ್ದೇವೆ ಎಂದರು.
ಈ ವೇಳೆ ವಕೀಲರಾದ ರವಿ ಮೆಣಸಿನಕಾಯಿ, ಸುನೀಲ ಮೇಧಾವಿ, ಮಹೇಶ ಗುಜ್ಜರಿ, ಈರಣ್ಣ ಗಾಣಗೇರ, ವಿಜಯಕುಮಾರ ಪೂಜಾರ, ಅತೀಶ ಪಾಟೀಲ, ಎಚ್.ಎಂ. ಸೊಪ್ಪಿನ ಮತ್ತಿತರರು ಇದ್ದರು.