ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ, ಮೊಹಾಲಿ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ಅರೆಸ್ಟ್ ವಾರೆಂಟ್ಗೆ ತಡೆಯಾಜ್ಞೆ ನೀಡುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೂಚಿಸಿದೆ. ಮೊಹಾಲಿ ನ್ಯಾಯಾಲಯ ಆದೇಶ ಮಾಡಿದ ಕೆಲ ಗಂಟೆಗಳ ಬಳಿಕ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ ರಾತ್ರಿ ತುರ್ತು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಮೂರ್ತಿ ಅನೂಪ್ ಚಿತ್ಕಾರ ಅವರು ಶನಿವಾರ ತಡರಾತ್ರಿ ತಮ್ಮ ನಿವಾಸದಲ್ಲಿ ತುರ್ತು ವಿಚಾರಣೆ ನಡೆಸಿದರು. ಮೇ 10 ರಂದು ನಡೆಯುವ ಮುಂದಿನ ವಿಚಾರಣೆವರೆಗೂ ಬಗ್ಗಾ ವಿರುದ್ಧ ಯಾವುದೇ ದಬ್ಬಾಳಿಕೆಯ ಕ್ರಮಗಳನ್ನು ತೆಗೆದುಕೊಳ್ಳದಂತೆ ನ್ಯಾಯಮೂರ್ತಿ ಆದೇಶಿಸಿದರು. ಹೈಕೋರ್ಟ್ ಆದೇಶದ ಕುರಿತು ಬಗ್ಗಾ ಅವರ ಹಿರಿಯ ವಕೀಲ ಅನಿಲ್ ಮೆಹ್ತಾ ಮಾಹಿತಿ ನೀಡಿದರು.
ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ತಜಿಂದರ್ ಪಾಲ್ ಸಿಂಗ್ ಬಗ್ಗಾ ಸಲ್ಲಿಸಿರುವ ಅರ್ಜಿಯನ್ನು ಮೇ 10 ಕ್ಕೆ ವಿಚಾರಣೆ ಮುಂದೂಡಲಾಗಿದೆ.