ಹೊಸ ದಿಗಂತ ವರದಿ, ಪಿರಿಯಾಪಟ್ಟಣ:
ತಾಲೂಕಿನ ಕೊಪ್ಪದ ಭಾರತ್ ಮಾತಾ ಶಾಲೆಯ ಮುಂಭಾಗ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೈಲಕುಪ್ಪೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಖಚಿತ ಆಧಾರ ಮಾಹಿತಿಯ ಮೇಲೆ ಬೈಲುಕುಪ್ಪೆ ಪಿಎಸ್ಐ ಅಜಯ್ ಕುಮಾರ್ ಅವರ ನೇತೃತ್ವದಲ್ಲಿ ಭಾರತ್ ಮಾತಾ ಶಾಲೆಯ ಮುಂಭಾಗ ಆವರ್ತಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಇಬ್ಬರು ಆರೋಪಿಗಳಾದ ಬೈಲುಕುಪ್ಪೆ ಗ್ರಾಮದ ಜಾವಿದ್, ಮಡಿಕೇರಿ ನಗರದ ಹರೀಶ್ ಎಂಬುವನು ಹೋಂಡಾ ಬೈಕಿನಲ್ಲಿ ಸುಮಾರು ಒಂದು ಕೆ.ಜಿ. 150 ಗ್ರಾಂ ನಷ್ಟು ಒಣ ಗಾಂಜಾವನ್ನು ಬೈಕಿನಲ್ಲಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಮಾಲು ಸಮೇತ ಇಬ್ಬರನ್ನು ಬಂಧಿಸಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಎಸ್ಐ ಅಜಯ್ ಕುಮಾರ್, ಸಿಬ್ಬಂದಿಗಳಾದ ಮಹದೇವಪ್ಪ, ಮುದ್ದುರಾಜ್, ಕುಮಾರಸ್ವಾಮಿ, ವೀರೇಂದ್ರ, ಸುರೇಶ್, ರಾಕೇಶ್, ಸಿದ್ದೇಗೌಡ, ಚಾಲಕ ಪ್ರದೀಪ್ ಇದ್ದರು.