ಹೊಸದಿಗಂತ ವರದಿ,ರಾಮನಗರ:
ಸರ್ಕಾರ ನಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸಿದರೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸಂಗಮದಲ್ಲಿ ಶನಿವಾರ ಪಾದಯಾತ್ರೆಯ ವೇದಿಕೆ ಸಿದ್ಧತೆ ಪರಿಶೀಲಿಸಿ ಅವರು ಮಾತನಾಡಿದರು. ಸರ್ಕಾರ ಈಗಾಗಲೇ ನೋಟಿಸ್ ನೀಡಿದೆ. ಜಿಲ್ಲೆಯ ಅಧಿಕಾರಿಗಳು ಸರ್ಕಾರದ ಅಣತಿಯಂತೆ ನಡೆಯುತ್ತಿದ್ದಾರೆ. ನನ್ನನ್ನು ಬಂಧಿಸಿ ಶರ್ಟು, ಪ್ಯಾಂಟು ಬಿಚ್ಚಿಸಿ ಜೈಲಿಗೆ ಹಾಕಿದರೂ ಪಾದಯಾತ್ರೆ ಮಾಡುವುದು ನಿಶ್ಚಿತ ಎಂದರು.
ಎಸ್ಪಿ ಜೊತೆ ಮಾತುಕತೆ: ಸಂಗಮದಲ್ಲಿ ರಾಮನಗರ ಎಸ್ಪಿ ಗಿರೀಶ್, ಡಿ.ಕೆ. ಶಿವಕುಮಾರ್ ಜೊತೆ ಕೆಲ ಹೊತ್ತು ರಹಸ್ಯವಾಗಿ ಮಾತುಕತೆ ನಡೆಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಗಿರೀಶ್ ‘ ತಾಲ್ಲೂಕು ಆಡಳಿತ ಈಗಾಗಲೇ ಶಿವಕುಮಾರ್ ಅವರಿಗೆ ನೋಟಿಸ್ ನೀಡಿದ್ದು, ಕಾನೂನು ಪಾಲಿಸುವಂತೆ ಕೋರಿದ್ದೇವೆ. ಅವರು ನೋಟಿಸ್ ಗೆ ಬೆಲೆ ನೀಡದೇ ಹೋದರೆ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದರು.
ಕನಕಪುರದಲ್ಲಿ ಕಾಂಗ್ರೆಸ್ ಶಾಸಕರ ಸಭೆ ಆರಂಭ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಆರ್.ವಿ. ದೇಶಪಾಂಡೆ, ಜಿ. ಪರಮೇಶ್ವರ, ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಶಾಸಕರು ಹಾಗೂ ಕೆಪಿಸಿಸಿ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.