ಹೊಸದಿಗಂತ ವರದಿ ಚಿತ್ರದುರ್ಗ:
ಮುರುಘಾ ಮಠದ ಶ್ರೀಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಷರತ್ತುಬದ್ದ ಜಾಮೀನಿನ ಮೇಲೆ ಕಾರಾಗೃಹದಿಂದ ಬಿಡುಗಡೆಯಾಗಿದ್ದ ಶೀಗಳಿಗೆ ಇದೀಗ ಬಂಧನದ ಭೀತಿ ಶುರುವಾಗಿದೆ.
ಮೊದಲನೇ ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಜಾಮೀನು ಪಡೆದು ಮುರುಘಾ ಶರಣರು ಇತ್ತೀಚೆಗೆ ಬಿಡುಗಡೆಯಾಗಿದ್ದರು. ಆದರೆ ಎರಡನೇ ಪ್ರಕರಣದಲ್ಲಿ ಮುರುಘಾ ಶರಣರಿಗೆ ಜಿಲ್ಲಾ ನ್ಯಾಯಾಲಯ ಜಾಮೀನುರಹಿತ ಬಂಧನಕ್ಕೆ ಆದೇಶಿಸಿದೆ.
ನ.16 ರಂದು ಶರಣರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಿಡುಗಡೆಗೆ ಮೊದಲು ಎರಡನೇ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿತ್ತು. ಬೆಳಿಗ್ಗೆ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಶರಣರು ಮಧ್ಯಾಹ್ನದ ವಿಚಾರಣೆಗೆ ಮೊಬೈಲ್ ಮೂಲಕ ವಿಸಿಗೆ ಹಾಜರಾಗಿದ್ದರು.
ವಿಚಾರಣೆ ನಡುವೆಯೇ ಬಿಡುಗಡೆ ಮಾಡಿದ್ದ ಪರಿಣಾಮ ನ.18 ರಂದು ನಡೆದ ನ್ಯಾಯಾಲಯದ ಕಲಾಪದ ವೇಳೆ ಜಿಲ್ಲಾ ಕಾರಗೃಹದ ಬಿಡುಗಡೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿತ್ತು.
ಇದೇ ಪ್ರಕರಣದ ಆದೇಶವನ್ನು ನ.20ಕ್ಕೆ ಕಾಯ್ದಿರಿಸಿದ್ದ ನ್ಯಾಯಾಲಯ, ಇದೀಗ ನ.21 ರೊಳಗೆ ಶರಣರನ್ನು ಬಂಧಿಸಿ ಕರೆತರುವಂತೆ ಆದೇಶಿಸಿದೆ.