ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಪಕ್ಷದ ಸರ್ಕಾರವನ್ನು ಉರುಳಿಸಲು ಭಾರತೀಯ ಜನತಾ ಪಕ್ಷವು (ಬಿಜೆಪಿ) ಪ್ರಯತ್ನಿಸುತ್ತಿದೆ ಎಂಬ ಆಮ್ ಆದ್ಮಿ ಪಕ್ಷ (ಎಎಪಿ) ಆರೋಪದ ಹಿನ್ನೆಲೆಯಲ್ಲಿ ಆಪ್ ಪಕ್ಷದ ಯಾವ ಶಾಸಕರೂ ಪ್ರತಿಪಕ್ಷಗಳೊಂದಿಗೆ ಸೇರಿಲ್ಲ ಎಂಬುದನ್ನು ಸಾಬೀತುಪಡಿಸಲು ದೆಹಲಿ ಸರ್ಕಾರವು ಇಂದು ಸದನದಲ್ಲಿ ವಿಶ್ವಾಸಮತ ನಿರ್ಣಯವನ್ನು ತರಲಿದೆ.
ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ವಿಧಾನಸಭೆಯ ತಮ್ಮ ಭಾಷಣದಲ್ಲಿ, “ಬಿಜೆಪಿ ಯಾವುದೇ ಎಎಪಿ ಶಾಸಕರನ್ನು ಖರೀದಿಸಲು ವಿಫಲವಾಗಿದೆ” ಎಂದು ದೆಹಲಿ ನಿವಾಸಿಗಳಿಗೆ ಸಾಬೀತುಪಡಿಸಲು ಸದನದಲ್ಲಿ ‘ವಿಶ್ವಾಸ ನಿರ್ಣಯ’ ತರುವುದಾಗಿ ಹೇಳಿದ್ದರು. “ಬಿಜೆಪಿಯವರು ಹಲವಾರು ಶಾಸಕರನ್ನು ಒಡೆದಿದ್ದಾರೆ ಎಂದು ನನಗೆ ಫೋನ್ ಕರೆಗಳು ಬಂದಿದ್ದವು. ಸರ್ಕಾರದಲ್ಲಿ ಎಲ್ಲವೂ ಸರಿಯಿದೆಯೇ ಎಂದು ಜನರು ನನ್ನನ್ನು ಕೇಳಿದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಆಪರೇಷನ್ ಕಮಲ ಇಲ್ಲಿ ಸಫಲವಾಗಿಲ್ಲವೆಂದು ತೋರಿಸಲು ನಾನು ಸದನದಲ್ಲಿ ವಿಶ್ವಾಸ ನಿರ್ಣಯವನ್ನು ತರಲು ಬಯಸುತ್ತೇನೆ” ಎಂದು ಕೇಜ್ರೀವಾಲ್ ಉಲ್ಲೇಖಿಸಿದ್ದರು.
ಆದರೆ ಈ ಹೇಳಿಕೆಗಳನ್ನು ತಳ್ಳಿಹಾಕಿರುವ ಬಿಜೆಪಿ ದೆಹಲಿಯ ಆಡಳಿತ ಪಕ್ಷವು ಸಿಬಿಐ ತನಿಖೆಯಲ್ಲಿರುವ ಅಬಕಾರಿ ನೀತಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವ ಬದಲು ಗಮನವನ್ನು ಬೇರೆಡೆಗೆ ಸೆಳೆಯಲು ನಾಟಕದಲ್ಲಿ ತೊಡಗಿದೆ ಎಂದು ಹೇಳಿದೆ.