ಹೊಸದಿಗಂತ ವರದಿ,ಗದಗ:
ಹಿರಿಯ ರಾಜಕಾರಣಿ ಸಿದ್ದರಾಮಯ್ಯ ಅವರು ಪೆಸಿಎಂ ನಂತಹ ಡರ್ಟಿ ಪಾಲಿಟಿಕ್ಸ್ಗೆ ಕೈ ಹಾಕಿರುವುದು ಕಾಂಗ್ರೆಸ್ ಅದಃ ಪತನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಭವಿಷ್ಯ ನುಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಿಕ್ಕಮಕ್ಕಳ ತರಹ ಗೋಡೆಗೆ ಪೋಸ್ಟರ್ ಹಚ್ಚುವದನ್ನು ನೋಡಿದರೆ ಮುಂದಿನ ಚುನಾವಣೆಯಲ್ಲಿ ಅವರಿಗೆ ಜನಾದೇಶವು ಪೋಸ್ಟರ್ ಹಚ್ಚುವ ಕೆಲಸ ನೀಡಲಿದೆ ಎಂದು ವ್ಯಂಗ್ಯವಾಡಿದರು. ೧೦ ದಿನಗಳ ಅಧಿವೇಶನದಲ್ಲಿ ಶೇ. ೪೦ ಕಮಿಷನ್ ಕುರಿತು ಚಕಾರ ಎತ್ತದೆ, ದಾಖಲೆ ನೀಡದೆ ಕೆಂಪಣ್ಣನವರನ್ನು ದುರ್ಬಳಿಕೆ ಮಾಡಿಕೊಂಡಿದೆ. ಅವರು ವೇಗವಾಗಿ ಅಪಾಧನೆಯಂತಹ ಡರ್ಟಿ ಪಾಲಿಟಿಕ್ಸ್ ಬಿಡಬೇಕು. ದಾಖಲೆಗಳಿದ್ದರೆ ಆಯಾ ಸಚಿವರ ಗಮನಕ್ಕೆ ತರಲಿ, ಈ ಬಗ್ಗೆ ಚರ್ಚಿಸಲು ಸರಕಾರ ಸಿದ್ದವಿದೆ ಎಂದು ಹೇಳಿದರು.
ದೇಶದಲ್ಲಿ ಕೋಮಸೌಹಾರ್ದತೆಯನ್ನು ಹಾಳುಗೆಡುತ್ತಿರುವ ಪಿಎಫ್ಐ ಕಾರ್ಯಕರ್ತರನ್ನು ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು. ಸಮಾಜದ ಸ್ವಾಸ್ಥ ಹಾಳು ಮಾಡುತ್ತಿರುವ ಪಿಎಫ್ಐ ಕಾರ್ಯಕರ್ತರನ್ನು ಈ ಹಿಂದೆ ತಮ್ಮ ಅಧಿಕಾರವಧಿಯಲ್ಲಿ ಬಂಧ ಮುಕ್ತಗೊಳಿಸಿರುವುದು ಸಿದ್ದರಾಮಯ್ಯನವರು ಮರೆಯಬಾರದು ಎಂದು ಸಚಿವ ಸಿ.ಸಿ.ಪಾಟೀಲ ಅವರು ಚಾಟಿ ಬೀಸಿದರು.
ಕಾಂಗ್ರೆಸ್ನವರಿಗೆ ವೀರಶೈವ ಸಮಾಜದವರು ಮುಖ್ಯಮಂತ್ರಿ ಆಗಿರುವದನ್ನು ಸಹಿಸುವ ಶಕ್ತಿಯಿಲ್ಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರ ಜನಪ್ರಿಯತೆ ಅವರಿಗೆ ಸಹಿಸಲಾಗುತ್ತಿಲ್ಲ, ೨ಎ ಮೀಸಲಾತಿ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರನ್ನು ತೆಗೆದಿರುವುದು ಖಂಡನೀಯವಾಗಿದೆ. ಸಮಾಜಕ್ಕೆ ಅವರ ಕೊಡುಗೆ ಅಪಾರವಿದೆ. ಸಮಾಜದವರ ಹೇಳಿಕೆಗಳನ್ನು ಕ್ರೀಡಾಮನೋಭಾವನೆಯಿಂದ ಸ್ವೀಕರಿಸುತ್ತೆನೆ ಎಂದರು.