ಹೊಸದಿಗಂತ ಡಿಜಿಟಲ್ ಡೆಸ್ಕ್
ಅತ್ತ ಆಂಧ್ರದ ಮಚಲೀಪಟ್ಟಣಕ್ಕೆ ಅಪ್ಪಳಿಸಿರುವ ಅಸಾನಿ ಚಂಡಮಾರುತ ನಿಧಾನವಾಗಿ ಶಿಥಿಲಗೊಳ್ಳುತ್ತಿದ್ದರೆ ಇತ್ತ ಇದರ ಪರಿಣಾಮ ಕರ್ನಾಟಕಕ್ಕೆ ತಟ್ಟಿದ್ದು, ಹೆಚ್ಚಿನ ಭಾಗಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
ಕಡಲಿಗೆ ಮುಂಗಾರಿನ ಲುಕ್!
ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ಈಗಾಗಲೇ ‘ಮುಂಗಾರು’ ವಾತಾವರಣ ಸೃಷ್ಟಿಸಿದೆ. ಸದ್ಯ ಗಾಳಿಯ ಚಲನೆ ದುರ್ಬಲವಾಗಿದ್ದು ಮೇ 16 ರಿಂದ ಇದು ಮತ್ತೆ ಪ್ರಬಲವಾಗುವ ಸಾಧ್ಯತೆ ಕಂಡುಬಂದಿದೆ.
ಎಲ್ಲೆಲ್ಲಿ ಇದೆ ಮಳೆ ಸಾಧ್ಯತೆ?
ಇಂದಿನ ಹವಾಮಾನ ಮುನ್ಸೂಚನೆ ಪ್ರಕಾರ ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಪಾವಗಢ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್ ಹಾಗೂ ಗುಲ್ಬರ್ಗ ಜಿಲ್ಲೆಗಳ ಅಲ್ಲಲ್ಲಿ ಉತ್ತಮ ಮಳೆ, ಬಳ್ಳಾರಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ನಿರೀಕ್ಷೆಯಿದೆ.
ಕರಾವಳಿಯಲ್ಲಿ ಹೇಗೆ?
ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಮುಂದಿನ ಒಂದೆರಡು ದಿನಗಳ ಕಾಲ ಮುಂಗಾರು ರೀತಿಯ ಮಳೆಯಾಗುವ ಸಾಧ್ಯತೆಯಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ