ಹೊಸದಿಗಂತ ವರದಿ ಮಡಿಕೇರಿ:
ಸೋಮವಾರಪೇಟೆ ಸಮೀಪದಲ್ಲಿರುವ ಕೋಟೆಯೂರು ಗ್ರಾಮದ ಶ್ರೀ ಜೋಡಿ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಲಾಯಿತು. ಗೌಡಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಟೆಯೂರು ಗ್ರಾಮದ ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಜೋಡಿ ಬಸವೇಶ್ವರ ದೇವಾಲಯ ಶಿಥಿಲಾವಸ್ಥೆಗೆ ತಲುಪಿತ್ತು.
ನೂತನ ದೇವಾಲಯ ನಿರ್ಮಾಣ ಕಾರ್ಯಕ್ಕೆ ತಪೋವನಕ್ಷೇತ್ರ ಮನೆಹಳ್ಳಿ ಮಠಾಧೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿಯವರ ನೇತೃತ್ವದಲ್ಲಿ ಬುಧವಾರ ಮುಂಜಾನೆ ಗ್ರಾಮಸ್ಥರು ಗಂಗೆ ಪೂಜೆಯೊಂದಿಗೆ ಭೂಮಿ ಪೂಜೆ ನೆರವೇರಿಸಿದರು. ಅಧ್ಯಕ್ಷ ಲೋಹಿತ್, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಅಜ್ಜಳ್ಳಿ, ನಾಗರಾಜು ಮತ್ತು ಗ್ರಾಮಸ್ಥರು ಹಾಜರಿದ್ದರು.