ಹೊಸದಿಗಂತ ವರದಿ, ಮಡಿಕೇರಿ:
ಮಹಿಳೆಯ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 18 ವರ್ಷಗಳ ನಂತರ ಆರೋಪಿಯನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆ ಸಮೀಪದ ಬೆಟ್ಟದಕೊಪ್ಪ ಗ್ರಾಮದ ಮಹಿಳೆ ರುಕ್ಮಿಣಿ ಎಂಬವರ ಮೇಲೆ 15.01.2004ರಂದು ಕುಂಬಾರಗಡಿಗೆ ನಿವಾಸಿ ತಂಬುಕುತ್ತಿರ ಕಾರ್ಯಪ್ಪ ಎಂಬಾತ ಕ್ಷುಲ್ಲಕ ವಿಚಾರಕ್ಕೆ ಹಲ್ಲೆ ನಡೆಸಿ ಪರಾರಿಯಾಗಿದ್ದಾಗಿ ಆರೋಪಿಸಲಾಗಿತ್ತು.
ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಲು ಪ್ರಯತ್ನಿಸಿದ್ದರೂ ಯಶ ಕಂಡಿರಲಿಲ್ಲ. ಇದೀಗ ಆರೋಪಿ ಸುಂಟಿಕೊಪ್ಪ ಸಮೀಪದ ಎಸ್ಟೇಟ್ನಲ್ಲಿರುವ ಬಗ್ಗೆ ಮಾಹಿತಿ ಲಭಿಸಿದ್ದು, 18 ವರ್ಷಗಳ ಬಳಿಕ ಬಂಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ.ಮಹೇಶ್, ಠಾಣಾಧಿಕಾರಿ ವಿರೂಪಾಕ್ಷ, ಹೆಡ್ ಕಾನ್ಸ್ಟೇಬಲ್ ಕುಮಾರ್, ಸಿಬ್ಬಂದಿಗಳಾದ ಕೇಶವಮೂರ್ತಿ, ತೀರ್ಥೇಶ್, ರಮೇಶ್ ಹಾಗೂ ಬಸಪ್ಪ ಪಾಲ್ಗೊಂಡಿದ್ದರು.