ಹೊಸದಿಗಂತ ವರದಿ, ಮಂಡ್ಯ :
ಹಾಡ ಹಗಲೇ ಮಹಿಳೆಯ ಕತ್ತು ಕೊಯ್ದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆ.ಆರ್. ಪೇಟೆ ತಾಲೂಕಿನ ಉದ್ದಿನಮಲ್ಲಮ್ಮನ ಹೊಸೂರು ಗ್ರಾಮದ ಗ್ರಾಮದ ರವಿ ಎಂಬಾತನೇ ಮಹಿಳೆಯನ್ನು ಬರ್ಭರವಾಗಿ ಹತ್ಯೆ ಮಾಡಿದ ಆರೋಪಿ.
ಡಾಣನಹಳ್ಳಿ ಗ್ರಾಮದ ಪುಷ್ಪಲತಾ (45) ಎಂಬಾಕೆಯನ್ನು ಹಾಡ ಹಗಲೇ ಆರೋಪಿ ರವಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಕೊಲೆಯಾದ ಮಹಿಳೆ ಪುಷ್ಪಲತಾ ತನ್ನ ಪತಿ ಶ್ರೀಕಾಂತ್ ನಿಧನದ ನಂತರ ಕಿಕ್ಕೇರಿಯಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದಳು. ಈಕೆಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ. ಡಾಣನಹಳ್ಳಿ ಗ್ರಾಮದಲ್ಲಿ 12 ಎಕರೆ ತೋಟ ಹೊಂದಿದ್ದ ಪುಷ್ಪಲತಾ ಟ್ರಾಕ್ಟರ್ ಸಹ ಇಟ್ಟುಕೊಂಡಿದ್ದು, ರವಿ ಟ್ರಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪುಷ್ಪಲತಾ ಹಾಗೂ ರವಿ ನಡುವೆ ಹಣಕಾಸಿನ ವಿಚಾರಕ್ಕೆ ವೈಮನಸ್ಸು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಜೂ. 15ರಂದು ಮಧ್ಯಾಹ್ನ ಕಿಕ್ಕೇರಿ ಪಟ್ಟಣದಲ್ಲಿ ವಿಶ್ರಾಂತಿ ಪಡೆಯಲು ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದು, ಮಧ್ಯಾಹ್ನ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅಕ್ರಮವಾಗಿ ಕೊಠಡಿ ಪ್ರವೇಶಿಸಿದ್ದ ರವಿ ಪುಷ್ಪಲತಾ ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.
ಪೊಲೀಸರು ಈ ಕೊಲೆ ಪ್ರಕರಣ ಗಂಭೀರವಾಗಿ ಪರಿಗಣಿಸಿ ನಾಗಮಂಗಲ ಡಿವೈಎಸ್ಪಿ ಹಾಗೂ ಕೆ.ಆರ್. ಪೇಟೆ ಟೌನ್ ಇನ್ಸ್ಪೆಕ್ಟರ್ ದೀಪಕ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ಮಾಹಿತಿ ಪಡೆದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂತು. ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.