ಹೊಸದಿಗಂತ ವರದಿ,ಶಿರಸಿ :
ಸ್ಮಶಾನದಲ್ಲಿ ಪೂಜೆ ,ಸ್ಮಶಾನದಲ್ಲಿ ಮದುವೆ,ಸ್ಮಶಾನದಲ್ಲಿ ಊಟ ಮಾಡುವ ನಾಸ್ತಿಕತೆ ಇರುವವರಿಗೆ ಹಿಂದೂ ಶಬ್ದದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಒಬ್ಬ ನಾಸ್ತಿಕ ಎಂದು ಖಂಡಿಸಿದರು. ಸತೀಶ್ ಜಾರಕಿಹೊಳೆ ತಮ್ಮ ಹೇಳಿಕೆಯನ್ನು ವಾಪಾಸ್ ಪಡೆಯಬೇಕು ,ಹಿಂದೂ ಜನರ ಕ್ಷಮೆ ಕೇಳಬೇಕು ಆಗ್ರಹಿಸಿದರು.
ಸತೀಶ್ ಜಾರಕಿಹೊಳಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಕಾಂಗ್ರೆಸ್ ನವರಿಗೆ ಇನ್ನೂ ಕೂಡ ಬುದ್ದಿ ಬಂದಿಲ್ಲ, ಹಿಂದುತ್ವ, ಹಿಂದುಗಳನ್ನು ಹಿಂದು ಧರ್ಮ, ಹಿಂದು ಸಂಘಟನೆಗಳನ್ನ ಅವಹೇಳನ ಮಾಡುವುದು ಸರಿಯಲ್ಲ. ಕುವೆಂಪುರವರು ಹಿಂದು, ಜೈನ, ಸಿಖ್, ಕ್ರಿಶ್ವಿಯನ್ ಎಂಬ ಶಬ್ದವನ್ನ ನಾಡಗೀತೆಯಲ್ಲಿ ಬಳಸಿದ್ದಾರೆ. ಆಜಾದ್ ಹಿಂದ್ ಪೌಜ್ ಎಂದು ಸುಭಾಷ್ ಚಂದ್ರಬೋಸ್ ರವರು ಬಳಸಿದ್ದಾರೆ. ಅನೇಕ ಸಂದರ್ಭದಲ್ಲಿ ಭಗತ್ ಸಿಂಗ್ , ಸಾವರ್ಕರ್ ಕೂಡ ಈ ಶಬ್ಧವನ್ನು ಬಳಸಿದ್ದಾರೆ. ಸುಪ್ರೀಂ ಕೋರ್ಟ ಕೂಡ 25 ವರ್ಷದ ಹಿಂದೆ ಹಿಂದೂ ಧರ್ಮ “ವೇ ಆಫ್ ಲೈಫ್ ” ಅತ್ಯಂತ ಒಳ್ಳೆಯ ಜೀವನದ ಪದ್ದತಿ ಎಂದು ಹೇಳಿಕೆ ಕೊಟ್ಟಿದೆ.
ಹಾಗಾದ್ರೆ ಸುಪ್ರೀಂ ಕೋರ್ಟನವರು ಮೂರ್ಖರಾ? ಎಂದು ಪ್ರಶ್ನಿಸಿದರು.
ಹಿಂದು ಶಬ್ಧ ಜಾತಿ ಸೂಚಕವಲ್ಲ,ಮತ ಸೂಚಕವಲ್ಲ ,ಇದು ಯಾವುದೇ ರೀತಿ ಸಂಬಂಧ ವಿಲ್ಲದ ಜೀವನದ ಪದ್ಧತಿ ಇರುವ ಈ ಶಬ್ದಕ್ಕೆ ಅಪಮಾನ ಮಾಡುತ್ತಿರುವುದು ಸರಿಯಲ್ಲ,ಇದನ್ನು ಖಂಡಿಸುತ್ತೇನೆ ಎಂದರು.