ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಮೂಲಕ ಕರಾವಳಿಯನ್ನು ಕಂಗೆಡಿಸಿರುವ ಉಗ್ರ ಮುಹಮ್ಮದ್ ಶಾರಿಕ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಆತನ ವಿಚಾರಣೆಗಾಗಿ ಪೊಲೀಸರು ಸಿದ್ಧತೆ ಆರಂಭಿಸಿದ್ದಾರೆ.
‘ಆರೋಪಿಯ ಆರೋಗ್ಯ ಸ್ಥಿತಿ ಮಾತನಾಡಲು ಹಾಗೂ ವಿಚಾರಣೆ ಎದುರಿಸಲು ಸ್ಥಿರವಾಗಿದೆ ಎಂಬ ವೈದ್ಯರ ಅನುಮತಿಯನ್ನು ಕಾಯಲಾಗುತ್ತಿದೆ. ಬಳಿಕ ವಿಚಾರಣೆ ಆರಂಭವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸದ್ಯ ಆತ ಮಾತನಾಡುವ ಸ್ಥಿತಿಗೆ ತಲುಪಿದ್ದರೂ ಸಂಪೂರ್ಣವಾಗಿ ಗುಣಮುಖನಾಗಿಲ್ಲ. ಇದು ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಸವಾಲಾಗಿದೆ. ಸಂಪೂರ್ಣ ಗುಣಮುಖನಾದ ಬಳಿಕ ಪೊಲೀಸ್ ಕಸ್ಟಡಿಗೆ ಪಡೆದಲ್ಲಿ ಮಾತ್ರ ಈತ ತನ್ನ ಕುಕೃತ್ಯದ ಬಗ್ಗೆ ಬಾಯ್ಬಿಡುವ ಸಾಧ್ಯತೆ ಇದೆ.