ಹೊಸದಿಗಂತ, ವರದಿ, ಮಡಿಕೇರಿ:
ಗಿರಿಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಯತ್ನಿಸುತ್ತಿದ್ದ ವ್ಯಕ್ತಿಗಳನ್ನು ಭಜರಂಗದಳದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪೊನ್ನಂಪೇಟೆ ತಾಲೂಕಿನ ತಿತಿಮತಿ ಬಳಿಯ ರೇಷ್ಮೆ ಹಡ್ಲು ಹಾಡಿಯಲ್ಲಿ ನಡೆದಿದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಹ ಕಾರ್ಯದರ್ಶಿ ಸಂತೋಷ್, ಪೊನ್ನಂಪೇಟೆ ಬಜರಂಗದಳ ಸಂಚಾಲಕ ಸಜು ಹಾಗೂ ವಿಶ್ವ ಹಿಂದೂ ಪರಿಷತ್’ನ ಪೊನ್ನಂಪೇಟೆ ಘಟಕದವರ ನೇತೃತ್ವದಲ್ಲಿ ತಿತಿಮತಿಯ ಹಾಡಿಯಲ್ಲಿರುವ ಗಿರಿಜನರಿಗೆ ಎಳ್ಳುಬೆಲ್ಲ ಹಂಚಲು ತೆರಳಿದ್ದರು. ಈ ವೇಳೆ ಹಾಡಿಯ ಜನರನ್ನು ಒಂದೇ ಕಡೆ ಕೂರಿಸಿಕೊಂಡು ಬೈಬಲ್ ಬೋಧನೆಯನ್ನು ಮಾಡುತ್ತಿದ್ದ ಕೆಲ ಕ್ರಿಶ್ಚಿಯನ್ ವ್ಯಕ್ತಿಗಳನ್ನು ಭಜರಂಗದಳದ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.
ಅಷ್ಟೇ ಅಲ್ಲದೇ ಈ ವ್ಯಕ್ತಿಗಳು ಪ್ರತಿ ಭಾನುವಾರ ಹಾಡಿಗಳಿಗೆ ಬಂದು ಬೈಬಲ್ ಬೋಧಿಸಿಕೊಂಡು ಹಾಡಿಯಲ್ಲೇ ನೆಲೆಸಿರುವ ಬಗ್ಗೆ ಈ ಸಂದರ್ಭ ತಿಳಿದು ಬಂದಿದೆ.
ಸುಮಾರು 500 ಕುಟುಂಬಗಳ 250 ಮಂದಿಯನ್ನು ಈಗಾಗಲೇ ಮತಾಂತರ ಮಾಡಿಸಲಾಗಿದೆ ಎಂದು ಭಜರಂಗದಳದ ಕಾರ್ಯಕರ್ತರು ಅರೋಪಿದ್ದಾರೆ. ಅಲ್ಲದೇ ಪ್ರತಿ ಆದಿವಾಸಿಗಳ ಹಾಡಿಯಲ್ಲಿ ಬೈಬಲ್ ಪುಸ್ತಕವನ್ನು ಹಂಚಿ ಮುಗ್ಧ ಜನರನ್ನು ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಐವರು ಕ್ರಿಶ್ಚಿಯನರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.