ಹೊಸಗಂತ ವರದಿ, ಗದಗ:
ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಸುರಿದ ಬಾರಿ ಮಳೆಯಿಂದ ತಾಲ್ಲೂಕಿನ ಹುಲಕೋಟಿ ಗ್ರಾಮದ ಹರ್ತಿ ರೋಡಿನಲ್ಲಿರುವ ಹಳ್ಳದಲ್ಲಿ ರಸ್ತೆ ದಾಟುವಾಗು ಅಟೋರಿಕ್ಷಾವೊಂದು ಕೊಚ್ಚಿಕೊಂಡು ಹೋಗಿದ್ದು ಅದೃಷ್ಟವಶಾತ್ ಅಟೋದಲ್ಲಿದ್ದ ಚಾಲಕ ಕರಿಯಪ್ಪ ಕರಿಯಣ್ಣವರ, ಮಗ ಪ್ರವೀಣ, ಒಂದು ವರ್ಷದ ಮಗು ಸಾನ್ವಿ ಹಾಗೂ ಪ್ರಯಾಣಿಕ ಗುರಪ್ಪ ಕೊಂಡಿಕೊಪ್ಪ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಂದಿನಂತೆ ರಾತ್ರಿ ಹೊಲಕ್ಕೆ ಹೋಗುವ ಗುರಪ್ಪ ಕೊಂಡಿಕೊಪ್ಪ ಅವರನ್ನು ಬಿಟ್ಟುಬರಲು ಅಟೋಚಾಲಕ ಕರಿಯಪ್ಪ ತಮ್ಮ ಮಕ್ಕಳನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲಿ ಹರ್ತಿ ರಸ್ತೆಯಲ್ಲಿರುವ ಹಳ್ಳವನ್ನು ದಾಟುತ್ತಿರುವ ಸಂದರ್ಭದಲ್ಲಿ ಒಮ್ಮೆಲೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದ್ದರಿಂದ ಹಳ್ಳದ ಮಧ್ಯದಲ್ಲಿ ಅಟೋರಿಕ್ಷಾ ಕೆಟ್ಟು ನಿಂತಿದೆ. ಮರುಕ್ಷಣವೆ ಆಟೋ ಹಳ್ಳದಲ್ಲಿ ಕೊಚ್ಚಿ ಹೋಗುವ ಅಪಾಯದ ಸುಳಿವನ್ನು ಅರಿತ ಚಾಲಕ ಹಾಗೂ ಪ್ರಯಾಣಿಕ ಮಕ್ಕಳನ್ನು ಗಟ್ಟಿಯಾಗಿ ಹಿಡಿದುಕೊಂಡು ರಭಸವಾಗಿ ಹರಿಯುತ್ತಿದ್ದ ನೀರಿನಲ್ಲೇ ಸಾಗಿ ದಡ ಸೇರಿ ಜೀವವನ್ನು ಉಳಿಸಿಕೊಂಡಿದ್ದಾರೆ. ಕೊಚ್ಚಿಹೋದ ಅಟೋರಿಕ್ಷಾ ಸುಮಾರು 300 ಅಡಿ ದೂರದಲ್ಲಿ ಗಿಡಕಂಠಿಗಳ ಮಧ್ಯ ಸಿಲುಕಿಕೊಂಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ