ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ದ್ವೀಪವಾಸಿ ಹೀಗೆ 50 ಕ್ಕೂ ಹೆಚ್ಚು ಬುಡಕಟ್ಟು ಸಂಪ್ರದಾಯಗಳ ಉಪಸ್ಥಿತಿ ಇರಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮ ಜನ್ಮಭೂಮಿ ಮಂದಿರದ ಆವರಣದಲ್ಲಿ ನಾಡಿನ ಎಲ್ಲ ಅಧ್ಯಾತ್ಮಿಕ ಧಾರ್ಮಿಕ ಪಂಥ, ಪಂಗಡ, ಪೂಜಾ ವಿಧಾನಗಳ ಆಚಾರ್ಯರು, ಸರ್ವ ಸಂಪ್ರದಾಯದ ಆಚಾರ್ಯರು, ಸಂತರು, ಮಹಾಮಂಡಲೇಶ್ವರ, ಮಂಡಲೇಶ್ವರ, ನಾಗಾ ಹೀಗೆ 150 ಸಂಪ್ರದಾಯಗಳ ಸಂತರು ಆಗಮಿಸುತ್ತಾರೆ. ಇವರೊಂದಿಗೆ 50 ಕ್ಕೂ ಹೆಚ್ಚು ಬುಡಕಟ್ಟು ಸಂಪ್ರದಾಯಗಳ ಜನರು ಭಾಗವಹಿಸುತ್ತಾರೆ. ಇದು ಇತಿಹಾಸದಲ್ಲೇ ಮೊದಲ ಬಾರಿ ನಡೆಯುತ್ತಿದೆ ಮತ್ತು ವಿಶಿಷ್ಟವಾಗಿದೆ ಎಂದರು.
ಸಂಪ್ರದಾಯಗಳಲ್ಲಿ ಶೈವ, ವೈಷ್ಣವ, ಶಾಕ್ತ, ಗಣಪತಿ, ಪಾರ್ಸಿ, ಸಿಖ್ಖ, ಬೌದ್ಧ, ಜೈನ, ಶಂಕರ ರಮಾನಂದ, ರಾಮಾನುಜ, ಮಾಧ್ವ, ವಿಷ್ಣು ನಾಮಿ, ಗರೀಬ್ದಾಸಿ, ಗೌಡಿಯಾ, ಕಬೀರಪಂಥಿ, ವಾಲ್ಮೀಕಿ, ಅಸ್ಸಾಂನ ಶಂಕರದೇವ್, ಮಾಧವ ದೇವ್, ಕರ್ನಾಟಕದ ವೀರಶೈವ, ಲಿಂಗಾಯತ, ಇಸ್ಕಾನ್, ರಾಮಕೃಷ್ಣ ಮಿಷನ್, ಚಿನ್ಮಯ ಮಿಷನ್, ಭಾರತ ಸೇವಾಶ್ರಮ ಸಂಘ, ಗಾಯತ್ರಿ ಪರಿವಾರ, ಠಾಕೂರ್ ಸಂಪ್ರದಾಯ, ಒರಿಸ್ಸಾದ ಮಹಿಮಾ ಸಮಾಜ, ಪಂಜಾಬ್ನ ಅಕಾಲಿ, ನಿರಂಕಾರಿ, ನಾಮಧಾರಿ, ರಾಧಾಸ್ವಾಮಿ ಮತ್ತು ಸ್ವಾಮಿನಾರಾಯಣ್, ಮಹಾರಾಷ್ಟ್ರದ ವಾರಕರಿ ಇತ್ಯಾದಿ ಸೇರಿವೆ.