ಹೊಸದಿಗಂತ ಡಿಜಿಟಲ್ ಡೆಸ್ಕ್
ಅಯೋಧ್ಯೆ: ದೇಶಾದ್ಯಂತ ಹಲವೆಡೆ ದೊಂಬಿ, ಗಲಾಟೆಗಳು ನಡೆಯುತ್ತಿದ್ದರೆ, ಶ್ರೀರಾಮನ ಅನುಗ್ರಹದಿಂದ ಎಲ್ಲೆಡೆ ಶಾಂತಿ ನೆಲೆಸಲಿ ಎಂದು ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ರಾಮಲಲ್ಲಾಗೆ ಆರತಿ, ಚಾಮರ ಸೇವೆ ನಡೆಸಿದ್ದಾರೆ.
ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರ ಸಭೆಯ ಹಿನ್ನೆಲೆಯಲ್ಲಿ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀಗಳು ಎರಡು ದಿನಗಳ ಅಯೋಧ್ಯೆ ಪ್ರವಾಸದಲ್ಲಿದ್ದಾರೆ. ಮಂಗಳವಾರ ಶ್ರೀರಾಮ ಜನ್ಮಭೂಮಿ ಸಂಕೀರ್ಣಕ್ಕೆ ಭೇಟಿ ನೀಡಿ, ರಾಮಲಲ್ಲಾನ ದರ್ಶನ ಪಡೆದರು. ನಂತರ ರಾಮಲಲ್ಲಾಗೆ ಆರತಿ ಹಾಗೂ ಚಾಮರ ಸೇವೆ ನೆರವೇರಿಸಿದರು.
ಈ ವೇಳೆ, ಪ್ರಭು ಶ್ರೀರಾಮಚಂದ್ರನ ಅನುಗ್ರಹ ಜಗತ್ತಿಗೆ ಎಲ್ಲೆಡೆ ಕೂಡ ದೊರಕಲಿ. ಇವತ್ತು ಎಲ್ಲೆಡೆ ದೊಂಬಿ, ಗಲಾಟೆಗಳನ್ನು ಕಾಣುತ್ತಿದ್ದೇವೆ. ಶ್ರೀರಾಮ ಮತ್ತು ಹನುಮಂತನ ಅನುಗ್ರಹದಿಂದಾಗಿ ಜಗತ್ತಿನ ಎಲ್ಲೆಡೆ ಶಾಂತಿ ಸುಭಿಕ್ಷೆ ನೆಲೆಸಲಿ ಎಂದು ರಾಮ ದೇವರನ್ನು ಪ್ರಾರ್ಥಿಸಿದ್ದಾಗಿ ಪೇಜಾವರ ಶ್ರೀಗಳು ಹೇಳಿದರು.
ಅಯೋಧ್ಯೆಯ ಜನ್ಮಭೂಮಿ ಸಂಕೀರ್ಣದಲ್ಲಿ ಪೇಜಾವರ ಶ್ರೀಗಳಿಂದ ರಾಮಲಲ್ಲಾಗೆ ಆರತಿ, ಚಾಮರ ಸೇವೆ.#Ayodhya #PejawarSwamiji #RamJanmabhoomi pic.twitter.com/z9h8bOwq5a
— Hosadigantha (@HosadiganthaWeb) April 19, 2022
ಅಯೋಧ್ಯೆಯ ಸರ್ಕ್ಯೂಟ್ ಹೌಸ್ನಲ್ಲಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸರ್ವ ಸದಸ್ಯರ ಸಭೆ ಆಯೋಜನೆಯಾಗಿದೆ. ಪೇಜಾವರ ಶ್ರೀಗಳ ಸಹಿತ ಟ್ರಸ್ಟ್ನ ಪದಾಧಿಕಾರಿಗಳು, ವಿಶ್ವಸ್ಥರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಬಳಿಕ ರಾಮಮಂದಿರ ನಿರ್ಮಾಣ ಕಾರ್ಯದ ಪರಿವೀಕ್ಷಣೆ ಮಾಡುತ್ತಾರೆ.