ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಕಕ್ಯಪದವಿನ ಮೈರಾ ನಿವಾಸಿ ಲಾವಣ್ಯ( 23) ಎಂಬಾಕೆಯನ್ನು ಸಾರ್ವಜನಿಕರ ಮುಂದೆಯೇ ಬರ್ಬರವಾಗಿ ಹತ್ಯೆಗೈದ ಆರೋಪಿ ಚೇತನ್ ನನ್ನು ಘಟನೆ ನಡೆದ 24 ತಾಸುಗಳ ಒಳಗೆ ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃತ್ಯ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಈತನನ್ನು ಮಂಗಳೂರು ಸಮೀಪದ ವಾಮಂಜೂರು ಪಚ್ಚನಾಡಿಯಲ್ಲಿ ಬಂಧಿಸಲಾಗಿದೆ.
ಗುರುವಾರ ಏನಾಗಿತ್ತು?
ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು.
ಎಂದಿನಂತೆ ಗುರುವಾರ ಸಾಯಂಕಾಲ ಕೆಲಸ ಮುಗಿಸಿ ಮನೆಗೆ ಹಿಂತಿರುಗಲು ಬಿ.ಸಿ. ರೋಡಿನಿಂದ ಕಕ್ಯಪದವು ಹೋಗುವ ಸರಕಾರಿ ಬಸ್ಸಿನಲ್ಲಿ ಯುವತಿ ಕುಳಿತಿದ್ದಾಗ ಏಕಾಏಕಿ ಆರೋಪಿ ಚೇತನ್ ಬಸ್ಸಿನ ಒಳಗಡೆ ಬಂದು ಹೊರಗಡೆ ಎಳೆದೊಯ್ದು ಮಚ್ಚಿನಿಂದ ದಾಳಿ ನಡೆಸಿದ್ದ. ಸಿನಿಮೀಯ ರೀತಿಯಲ್ಲಿ ಹಾಡಹಗಲೇ ನಡೆದ ಭಯಾನಕ ಘಟನೆ ಜನರನ್ನು ಆತಂಕಕ್ಕೀಡುಮಾಡಿತ್ತು.



