September 15, 2026
Tuesday, September 15, 2026
spot_img

ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯಳ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ್ದ ಚೇತನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ಮಚ್ಚು ಬೀಸಿ ಲಾವಣ್ಯಳನ್ನು ಹತ್ಯೆಗೈದ ಆರೋಪಿ ಚೇತನ್, ಆತ್ಮಹತ್ಯೆಗೆ ಯತ್ನಿಸಿದ್ದ ಎಂಬ ಅಂಶ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಕೃತ್ಯದ ಬಳಿಕ ಮಚ್ಚನ್ನು ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದ ಆರೋಪಿ ಚೇತನ್ ಇಲಿಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಆತನನ್ನು‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಸ್ಪತ್ರೆಯಲ್ಲಿ ಆರೋಪಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ, ಆತನ ಚೇತರಿಕೆಯ ಬಳಿಕ ವಿಚಾರಣೆಗೊಳಪಡಿಸಬೇಕಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಲಾವಣ್ಯ ಮತ್ತು ಚೇತನ್ ನಡುವೆ ಪ್ರೇಮ ಸಂಬಂಧವಿದ್ದಿತ್ತು ಎನ್ನಲಾಗಿದ್ದು, ಯಾವುದೋ ಕಾರಣಕ್ಕಾಗಿ ಅವರ ನಡುವಿನ ಪ್ರೇಮ ಬ್ರೇಕಪ್ ಆಗಿತ್ತು. ಆದರೂ ಚೇತನ್ ಲಾವಣ್ಯಳನ್ನು ಬಿಡದೆ ತೊಂದರೆ ನೀಡುತ್ತಿದ್ದ. ಪ್ರೀತಿ ಮಾಡಲು ಒತ್ತಾಯ ಮಾಡುತ್ತಿದ್ದ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಗುರುವಾರ ಸಂಜೆ ಚೇತನ್ ಮಚ್ಚಿನೇಟಿನಿಂದ ಲಾವಣ್ಯ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ತೀವ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ನಂತರ ಸ್ಥಳೀಯರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ನಿನ್ನೆ ಸಂಜೆ 5.45ರ ಸುಮಾರಿಗೆ ಘಟನೆ ನಡೆದಿತ್ತು ಕೃತ್ಯದ ಬೆನ್ನಲ್ಲೇ ಆರೋಪಿ ಚೇತನ್ ಪರಾರಿಯಾಗಿದ್ದ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !