ಹೊಸ ದಿಗಂತ ಡಿಜಿಟಲ್ ಡೆಸ್ಕ್
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಜೊತೆಗಿನ ಶಿವಸೇನಾ ಮೈತ್ರಿಯನ್ನು ಒಪ್ಪದ ಶಿವಸೇನಾ ಶಾಸಕರ ಬಂಡಾಯದಿಂದ ಉದ್ಭವಿಸಿದ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದೆ. ಮತ್ತೆ ಮೂವರು ಶಿವಸೇನಾ ಶಾಸಕರು ಏಕನಾಥ್ ಶಿಂಧೆ ನೇತೃತ್ವಕ್ಕೆ ಬೆಂಬಲ ಸಾರಿದ್ದಾರೆ. ಇನ್ನೊಂದೆಡೆ ಸರಕಾರಕ್ಕೆ ತಿರುಗಿಬಿದ್ದಿರುವ ಶಿವಸೇನಾ ಶಾಸಕರಲ್ಲಿ ಗೊಂದಲ ಸೃಷ್ಟಿಸಲು ಉದ್ಧವ್ ಠಾಕ್ರೆ ಬಣದ ಶಿವಸೇನಾ ನಾಯಕರು ತರಾವಳಿ ಹೇಳಿಕೆಗಳನ್ನು ನೀಡುತ್ತಿದ್ದು, ಶಿವಸೈನಿಕನೊಬ್ಬ ಮುಖ್ಯಮಂತ್ರಿಯಾಗುವುದಾದರೆ ತಾನು ರಾಜೀನಾಮೆ ನೀಡಲು ಸಿದ್ಧ ಎಂಬ ಭಾವನಾತ್ಮಕ ಹೇಳಿಕೆಯನ್ನು ಸಿಎಂ ಉದ್ಧವ್ ಠಾಕ್ರೆ ನೀಡಿದ್ದಾರೆ.
ಗುರುವಾರ ಮತ್ತೆ ಮೂವರು ಶಿವಸೇನಾ ಶಾಸಕರು ಗುವಾಹಟಿಗೆ ತೆರಳಿ ಸಚಿವ ಏಕನಾಥ್ ಶಿಂಧೆ ನೇತೃತ್ವದ ಗುಂಪನ್ನು ಸೇರಿಕೊಂಡಿದ್ದಾರೆ.
ಸಾವಂತವಾಡಿಯ ಶಾಸಕ ದೀಪಕ್ ಕೇಸಕರ್,ಚೆಂಬೂರ್ ಶಾಸಕ ಮಂಗೇಶ್ ಕುಡಾಲ್ಕರ್ ಮತ್ತು ದಾದರ್ ಶಾಸಕ ಸದಾ ಸರ್ವಾಂಕರ್ ಅವರು ಮುಂಬೈನಿಂದ ಗುವಾಹಟಿಗೆ ಬೆಳಿಗ್ಗೆ ವಿಮಾನದಲ್ಲಿ ತೆರಳಿದರು ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುನ್ನ ಬುಧವಾರ ಸಂಜೆ ಮಹಾರಾಷ್ಟ್ರ ಸಚಿವ ಗುಲಾಬ್ರಾವ್ ಪಾಟೀಲ್ ಸೇರಿದಂತೆ ನಾಲ್ವರು ಶಾಸಕರು ಗುವಾಹಟಿಗೆ ತೆರಳಿದ್ದರು.ಪ್ರಕೃತ ೩೭ಮಂದಿ ಶಿವಸೇನಾ ಶಾಸಕರು ಮತ್ತು ೯ಮಂದಿ ಪಕ್ಷೇತರರು ಗುವಾಹಟಿಯಲ್ಲಿದ್ದು, ಇದರಿಂದ ಎಂವಿಎ ಸರಕಾರ ಸಂಕಟಕ್ಕೆ ಸಿಲುಕಿದೆ.
ಇದರಿಂದಾಗಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಬಲ ತೀವ್ರವಾಗಿ ಕುಗ್ಗಲಾರಂಭಿಸಿದೆ.