ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ಸರಕಾರವು ಬಹುಪತ್ನಿತ್ವವನ್ನು ನಿಷೇಧಿಸಲು ಮುಂದಾಗಿದೆ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ತಿಳಿಸಿದ್ದಾರೆ.
ಇದಕ್ಕಾಗಿ ಸಿಎಂ ಶರ್ಮಾ ತಜ್ಞರ ಸಮಿತಿಯನ್ನು ರಚನೆ ಮಾಡಿದ್ದಾರೆ. ಈ ವರದಿ ಆಧರಿಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಲು ಶರ್ಮಾ ಮುಂದಾಗಿದ್ದಾರೆ.
ಅಸ್ಸಾಂನಲ್ಲಿ ಏಕರೂಪದ ನೀತಿ ಸಂಹಿತೆ ಜಾರಿಗೊಳಿಸುತ್ತಿಲ್ಲ. ಆದರೆ ಬಹುಪತ್ನಿತ್ವ ನಿಷೇಧ ಮಾಡಲು ಸಜ್ಜಾಗಿದ್ದೇವೆ. ಬಹುಪತ್ನಿತ್ವ ನಿಷೇಧ ಮಾಡಲು ಸರ್ಕಾರಕ್ಕೆ ಅಧಿಕಾರವಿದೆಯಾ ಅನ್ನೋದನ್ನು ನೂತನ ಸಮಿತಿ ವರದಿ ನೀಡಲಿದೆ. ಎಲ್ಲಾ ಆಯಾಮದಲ್ಲಿ ತಜ್ಞರ ಸಮಿತಿ ವರದಿ ನೀಡಲಿದೆ. ಬಹುಪತ್ನಿತ್ವಕ್ಕೆ ಅಂತ್ಯಹಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇದಕ್ಕಿರುವ ತೊಡಕುಗಳು ಕುರಿತು ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ತಜ್ಞರ ಸಮಿತಿ ಮುಸ್ಲಿಮ್ ಪರ್ಸನಲ್ ಲಾ(ಷರಿಯತ್) ಕಾಯ್ದೆ 1937, ಸಂವಿಧಾನದಲ್ಲಿರುವ ಆರ್ಟಿಕಲ್ 25ರ ಅಡಿಯಲ್ಲಿ ನೀಡಿರುವ ಸ್ವಾತಂತ್ರ್ಯದ ಕುರಿತು ತಜ್ಞರ ಸಮಿತಿ ಅಧ್ಯಯನ ನಡೆಸಲಿದೆ. ಈ ವರದಿ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಭೌಗೋಳಿಕ ಜನಸಂಖ್ಯೆ ಅನುಪಾತ ಸಮತೋಲನ ತಪ್ಪುತ್ತಿದೆ. ಇತ್ತ ಹೆಣ್ಣುಮಕ್ಕಳ ಬದುಕು ದುಸ್ತರವಾಗಿದೆ. ಬಹುಪತ್ನಿತ್ವ ದೇಶಕ್ಕೆ ಒಳಿತಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ದೇಶದಲ್ಲಿ ಕ್ರಾಂತಿಕಾರಕ ಹೆಜ್ಜೆ ಇಡುವ ಅವಶ್ಯಕತೆ ಇದೆ.ಇಲ್ಲದಿದ್ದರೆ ಭಾರತ ಸರ್ವನಾಶವಾಗಲಿದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.