ಹೊಸದಿಗಂತ ಡಿಜಿಟಲ್ ಡೆಸ್ಕ್ :
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಯಲ್ಲಿ ಆರಂಭಿಕ ಹಿನ್ನಡೆ ನಡುವೆಯೂ ಪುಟಿದೆದ್ದಿರುವ ಭಾರತ ತಂಡ 2-2ರಿಂದ ಸಮಬಲ ಸಾಧಿಸಿದ್ದು, ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಹಣಾಹಣಿ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಆದರೆ ಉದ್ಯಾನನಗರಿಯಲ್ಲಿ ಕೆಲದಿನಗಳಿಂದ ಮಳೆಯಾಗುತ್ತಿದ್ದು, ಇಂದೂ ಕೂಡ ಕ್ರಿಕೆಟ್ ಪ್ರೇಮಿಗಳ ಸಂಭ್ರಮಕ್ಕೆ ವರುಣ ತಣ್ಣೀರೆರಚುವ ಸಾಧ್ಯತೆ ಹೆಚ್ಚಿದೆ.
ಸರಣಿಯ ನಿರ್ಣಾಯಕ ಹೋರಾಟದ ವೀಕ್ಷಣೆಗೆ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿದ್ದು, ಅಂತಿಮ ಪಂದ್ಯದ ವೀಕ್ಷಣೆಗೆ ಅಭಿಮಾನಿಗಳು ಕಿಕ್ಕಿರಿದು ಸೇರುವ ಸಾಧ್ಯತೆ ಇದೆ. ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಎಂಟಿಸಿ ಹಾಗೂ ಮೆಟ್ರೋ ಸಂಚಾರದ ಅವಧಿಯನ್ನೂ ಮಧ್ಯರಾತ್ರಿಯವರೆಗೆ ವಿಸ್ತರಿಸಿ ಅನುವು ಮಾಡಿಕೊಡಲಾಗಿದೆ.
ಸತತ ಮಳೆ ಸುರಿದರೆ ಪಂದ್ಯಕ್ಕೆ ತೊಂದರೆ
ಚಿನ್ನಸ್ವಾಮಿ ಮೈದಾನದಲ್ಲಿ ಸಬ್ ಏರ್ ಸ್ಟಿಸ್ಟಮ್ ಅಳವಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಎಷ್ಟೇ ದೊಡ್ಡ ಪ್ರಮಾಣದಲ್ಲಿ ಮಳೆಬಿದ್ದರೂ ಆಟಕ್ಕೆ ಪಿಚ್ ಸಜ್ಜುಗೊಳಿಸಲು ಕೆಲ ನಿಮಿಷಗಳು ಸಾಕು. 20 ನಿಮಿಷಗಳಲ್ಲೇ ಪಂದ್ಯ ಮರಳಿ ಆರಂಭಿಸಬಹುದು. ಆದರೆ, ಮಳೆ ಬಿಡುವು ನೀಡದೆ ಸತತವಾಗಿ ಸುರಿದರೆ, ಪಂದ್ಯಕ್ಕೆ ಅಡ್ಡಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಿಳಿಸಿದೆ.