ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದು, ಹಿಂದುಗಳ ಮೇಲೆ ದಾಳಿ ನಡೆಯುತ್ತಿದೆ. ಈ ಮಧ್ಯೆ ಹಂಗಾಮಿ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಢಾಕಾದಲ್ಲಿರುವ ಢಾಕೇಶ್ವರಿ ರಾಷ್ಟ್ರೀಯ ಹಿಂದು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಬಳಿಕ ಮಾತನಾಡಿದ ಯೂನಸ್, ಇಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿದೆ. ನಾವೆಲ್ಲರೂ ಒಂದೇ ಮತ್ತು ನಮಗೆ ಒಂದೇ ಹಕ್ಕುಗಳಿವೆ. ನಮ್ಮೊಳಗೆ ತಾರತಮ್ಯ ಮಾಡಬೇಡಿ. ನಮಗೆ ಸಹಾಯಮಾಡಿ. ಸರ್ಕಾರಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಾಳ್ಮೆಯಿಂದಿರಿ ಎಂದು ಎಲ್ಲರ ಸಹಕಾರವನ್ನು ಕೋರಿದರು. ನಾವು ಏನು ಮಾಡಲು ಸಾಧ್ಯವಾಯಿತು ಮತ್ತು ಏನು ಮಾಡಬಾರದು ಎಂಬುದನ್ನು ನಿರ್ಧರಿಸಲು ವಿಫಲವಾದರೆ ನಮ್ಮನ್ನೂ ಟೀಕಿಸಿ ಎಂದು ಹೇಳಿದರು.
ನಮ್ಮ ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಲು ಮುಸ್ಲಿಮರು, ಹಿಂದುಗಳು, ಬೌದ್ಧರು ಎನ್ನದೆ ಮನುಷ್ಯರಾಗಿ ಒಗ್ಗೂಡಬೇಕು. ಎಲ್ಲರ ಹಕ್ಕುಗಳನ್ನು ಖಾತ್ರಿಪಡಿಸಬೇಕು, ಸಾಂಸ್ಥಿಕ ವ್ಯವಸ್ಥೆಗಳ ನಾಶಕ್ಕೆ ಈ ಎಲ್ಲ ಸಮಸ್ಯೆಗಳು ಉದ್ಭವಿಸಿವೆ ಅದನ್ನು ಸರಿಪಡಿಸಬೇಕು ಎಂದು ತಿಳಿಸಿದರು.
ಶೇಖ್ ಹಸೀನಾ ಸರ್ಕಾರ ಪತನವಾದ ನಂತರ ಬಾಂಗ್ಲಾದೇಶದಲ್ಲಿನ 52 ಜಿಲ್ಲೆಗಳಲ್ಲಿ ಹಿಂದು, ಬೌದ್ಧ, ಕ್ರಿಶ್ಚಿಯನ್ ಸೇರಿದಂತೆ ಅಲ್ಪಸಂಖ್ಯಾತರ ಮೇಲೆ 205 ದಾಳಿಯ ಘಟನೆಗಳು ನಡೆದಿವೆ ಎಂದು ಪಿಟಿಐ ವರದಿ ಮಾಡಿದೆ.