ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಕ್ತರು ವಿನೂತನ ರೀತಿಯಲ್ಲಿ ಗಣೇಶನ ಹಬ್ಬಕ್ಕೆ ಅಂಕಾರ ಮಾಡುತ್ತಾರೆ. ಪರಿಸರ ಸ್ವಚ್ಛತೆ ಗಮನದಲ್ಲಿಟ್ಟುಕೊಂಡು ಮನ್ಣಿನ ಗಣೇಶ ಕೂರಿಸುವ ಪರಿಕಲ್ಪನೆಯೊಂದಿಗೆ ದೇವಾಲಯ ಅಲಂಕಾರ, ದೇವರ ಅಲಂಕಾರವೂ ಹಾಗೆಯೇ ಇರಬೇಕೆಂದು ಭಿನ್ನ, ವಿಭಿನ್ನ ರೀತಿಯಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡುತ್ತಾರೆ.
ಅದರಂತೆ ಬೆಂಗಳೂರಿನ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನದ ಆವರಣವನ್ನು ಭಾರತೀಯ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳಿಂದ ಅಲಂಕರಿಸಲಾಗಿದೆ. ನಾಣ್ಯಗಳ ಜೊತೆಗೆ 500, 200, 100, 50, 20 ಮತ್ತು 10 ರೂ ನೋಟುಗಳನ್ನು ಅಲಂಕಾರಕ್ಕೆ ಬಳಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಹೊಸತನ್ನು ಮಾಡುವ ಉದ್ದೇಶದಿಂದ ವ್ಯವಸ್ಥಾಪಕರು 2 ಕೋಟಿ ರೂಪಾಯಿಗೂಗೂ ಹೆಚ್ಚು ನೋಟು ಹಾಗೂ 50 ಲಕ್ಷ ರೂಪಾಯಿ ನಾಣ್ಯಗಳಿಂದ ದೇವಾಲಯ ಹಾಗೂ ಗಣಪನನ್ನು ಸಿಂಗರಿಸಿದ್ದಾರೆ. ಪ್ರತಿಬಾರಿ ಹೂವು, ಜೋಳ, ಬಾಳೆ ಕಾಯಿ ಮತ್ತು ವಿವಿಧ ಹಣ್ಣುಗಳನ್ನು ಬಳಸಲಾಗುತ್ತದೆ. ಈ ಬಾರಿಯೂ ಅದೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ದೇವಸ್ಥಾನದ ಅಲಂಕಾರಕ್ಕೆ ಕರೆನ್ಸಿ ನೋಟುಗಳನ್ನು ಬಳಸಲಾಗಿದೆ.
ಬಿಗಿ ಭದ್ರತೆ
ಇಷ್ಟೆಲ್ಲಾ ಹಣದ ಅಲಂಕಾರ ಇದೆ ಅಂದ ಮೇಲೆ ಭದ್ರತೆ ಕೂಡ ಬೇಕಲ್ಲ. ಹಾಗಾಗಿಯೇ ದೇವಸ್ಥಾನದಲ್ಲಿ 22 ಸಿಸಿಟಿವಿ ಅಳವಡಿಸಿದ್ದು, ಬ್ಯಾರಿಕೇಡ್ ಹಾಕಿ ಭಕ್ತರು ಅಲಂಕಾರವನ್ನು ಮುಟ್ಟದಂತೆ ವ್ಯವಸ್ಥೆ ಮಾಡಲಾಗಿದೆ. ಗನ್ ಮ್ಯಾನ್, ಸೆಕ್ಯೂರಿಟಿ, ಟ್ರಸ್ಟ್ ಸದಸ್ಯರೂ ಭದ್ರತೆಯಲ್ಲಿ ತೊಡಗಿದ್ದಾರೆ.