ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡಿನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನ ಯುವತಿ ಲಾವಣ್ಯ ಗೌಡಳನ್ನು ಪೈಶಾಚಿಕವಾಗಿ ಹತ್ಯಗೈದ ಪ್ರಕರಣದ ಆರೋಪಿ ಚೇತನ್ ನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಡಿಸ್ಚಾಜ್೯ಗೊಳಿಸಲಾಗಿದೆ.
ಸದ್ಯ ಬಂಟ್ವಾಳ ನಗರ ಪೊಲೀಸರು ವಶದಲ್ಲಿರುವ ಈತನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ವಿಚಾರಣೆ ಮತ್ತು ಕೆಲ ಕಾನೂನು ಪ್ರಕ್ರಿಯೆ ನಡೆಸುವ ನಿಟ್ಟಿನಲ್ಲಿ ನ್ಯಾಯಾಲಯದ ಮುಂದೆ ನಿವೇದಿಸಿ ಒಂದೆರಡು ದಿನ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:
ಜುಲೈ 16 ರಂದು ಸಂಜೆ 5.45 ರಹೊತ್ತಿಗೆ ಮನೆಗೆ ತೆರಳಲೆಂದು ಬಿ.ಸಿ. ರೋಡ್ ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಬಂದಿದ್ದ ಕಕ್ಕೆಪದವಿನ ಅಮಾಯಕ ಯುವತಿ ಲಾವಣ್ಯಳನ್ನು ಹೊಂಚು ಹಾಕಿ ಕುಳಿತಿದ್ದ ಗೇರುಕಟ್ಟೆಯ ಚೇತನ್ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯಗೈದು ರಾಜಾರೋಷವಾಗಿ ಕಾರಿನಲ್ಲಿ ಪರಾರಿಯಾಗಿ ಮರುದಿನ ಮಂಗಳೂರಿನ ಪಚ್ಚನಾಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ ವೇಳೆ ತಾನು ಇಲಿಪಾಷಣ ಪದಾರ್ಥ ಸೇವಿಸಿದ್ದಾಗಿ ತಿಳಿಸಿದ್ದ.
ಈ ಹಿನ್ನೆಲೆಯಲ್ಲಿ ತಕ್ಷಣ ಅತನಿಗೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತಿತ್ತು. ಬಳಿಕ ಚೇತರಿಸಿಕೊಂಡಿದ್ದ ಈತನನ್ನು ಎರಡು ದಿನಗಳ ಹಿಂದೆ ತುರ್ತುಘಟಕದಿಂದ ವಾಡ್೯ ಗೆ ಶಿಷ್ಟ್ ಮಾಡಲಾಗಿತ್ತು. ಅಲ್ಲಿ ಈತನಿಗೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಸೋಮವಾರ ಈತನನ್ನು ಆಸ್ಪತ್ರೆಯಿಂದ ಡಿಸ್ಚಾಜ್೯ ಗೊಳಿಸಿ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ.



