ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಣೇಶ ಹಬ್ಬದ ಸಂಭ್ರಮದಲ್ಲಿರುವ ನಮ್ಮ ಜನತೆಯ ಸುರಕ್ಷತೆಗೆ ಮೊದಲ ಆದ್ಯತೆ ಕೊಟ್ಟಿರುವ ಬೆಸ್ಕಾಂ ಗಣೇಶ ಮಂಟಪಗಳ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹಾಗೂ ವಿಸರ್ಜನೆ ಮೆರವಣಿಗೆ ಮಾರ್ಗಗಳ ಸುರಕ್ಷತೆ ಕುರಿತು ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಏನೆಲ್ಲಾ ಮುನ್ನೆಚ್ಚರಿಕೆ ಕ್ರಮ ಇದೆ ನೋಡಿ:
ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಕರುನಾಡು ಸಜ್ಜಾಗಿರುವ ಬೆನ್ನಲ್ಲೇ, ಗಣೇಶೋತ್ಸವ ಆಚರಣೆ ವೇಳೆ ಯಾವುದೇ ವಿದ್ಯುತ್ ಅವಘಡ ಸಂಭವಿಸದಂತೆ ಬೆಸ್ಕಾಂ ಮುನ್ನೆಚ್ಚರಿಕೆ ವಹಿಸಿದೆ.
ಗಣೇಶ ಮಂಟಪಗಳಿಗೆ ವಿದ್ಯುತ್ ಸಂಪರ್ಕ ನೀಡುವ ಮೊದಲು ಅರ್ಥ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್ (ELCB) ಅಳವಡಿಕೆ ಕಡ್ಡಾಯ.
ವೈರಿಂಗ್ ಕೂಡ ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ ಸುರಕ್ಷತಾ ನಿಯಮಗಳಿಗೆ ಅನುಗುಣವಾಗಿರಬೇಕು.
ಗಣೇಶ ವಿಸರ್ಜನೆ ಮೆರವಣಿಗೆ ಸಾಗುವ ಮಾರ್ಗಗಳಲ್ಲಿರುವ ಸಡಿಲ ಅಥವಾ ಜೋತುಬಿದ್ದ ವಿದ್ಯುತ್ ತಂತಿಗಳನ್ನು ಮುಂಚಿತವಾಗಿ ಪರಿಶೀಲಿಸಿ ತಕ್ಷಣ ಸರಿಪಡಿಸಬೇಕು.
ಮೆರವಣಿಗೆ ಮಾರ್ಗದಲ್ಲಿರುವ ಟ್ರಾನ್ಸ್ಫಾರ್ಮರ್, RMU ಹಾಗೂ LT ಡಿಸ್ಟ್ರಿಬ್ಯೂಷನ್ ಬಾಕ್ಸ್ಗಳನ್ನು ‘ಡೇಂಜರ್ ಜೋನ್’ ಎಂದು ಗುರುತಿಸಬೇಕು.
ಬೆಸ್ಕಾಂನ ವಿದ್ಯುತ್ ಮೂಲಸೌಕರ್ಯಗಳಿಗೆ ಯಾವುದೇ ಬ್ಯಾನರ್ ಅಥವಾ ಪೋಸ್ಟರ್ ಕಟ್ಟಬಾರದು ಎಂದು ಸೂಚಿಸಲಾಗಿದೆ.
ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ (NOC) ದೊರೆತ ಬಳಿಕವೇ ಸಂಬಂಧಪಟ್ಟ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳು ಗಣೇಶ ಮಂಟಪದ ಸ್ಥಳ ಪರಿಶೀಲಿಸಬೇಕು.
ಸ್ಥಳ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಅನುಮತಿ ನೀಡಬೇಕು.
ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸುವ ಅರ್ಜಿಯೊಂದಿಗೆ ಸಂಬಂಧಪಟ್ಟ ಎಲ್ಲ ಪ್ರಾಧಿಕಾರಗಳಿಂದ ಅಗತ್ಯ NOC ಪಡೆದಿರುವುದನ್ನು ಪರಿಶೀಲಿಸಬೇಕು.
ಗಣೇಶೋತ್ಸವದ ವೇಳೆ ಬಳಸುವ ವಿದ್ಯುತ್ ಪ್ರಮಾಣವನ್ನು ತಂತ್ರಾಂಶದಲ್ಲಿ ದಾಖಲಿಸುವಂತೆ ಬೆಸ್ಕಾಂ ಸೂಚಿಸಿದೆ.



