ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಮಾಣಿ ಮೈಸೂರು ಹೆದ್ದಾರಿಯ ನೇರಳಕಟ್ಟೆಯಲ್ಲಿ ಹಾಡಹಗಲು ರಿಕ್ಷಾದಲ್ಲಿ ಬಂದ ಆಗಂತುಕರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಗೆ ಚೂರಿಯಿಂದ ಇರಿದು ರಸ್ತೆಯಲ್ಲೇ ಕೆಲವು ಸಮಯ ನರಳಾಡಿದ್ದು, ಆಸ್ಪತ್ರೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾರೆ.
ಪುತ್ತೂರಿನ ಬಂಟರ ಭವನದ ಬಳಿ ಹೊಟೇಲ್ ನಡೆಸಿಕೊಂಡಿರುವ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ದೇವಿನಗರದ ಕ್ವಾಟ್ರಾಸ್ ನಿವಾಸಿ ಶಕುಂತಳಾ (36) ಮೃತ ಮಹಿಳೆಯಾಗಿದ್ದಾರೆ. ಕುಂಡಡ್ಕ ಮೂಲದ ಯುವಕನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ
ಶಕುಂತಳಾ ಮಧ್ಯಾಹ್ನ ಹೋಟೇಲ್ ಬಾಗಿಲು ಹಾಕಿ ಮನೆಗೆ ಬರುತ್ತಿದ್ದ ಸಂದರ್ಭ ರಿಕ್ಷಾದಲ್ಲಿ ಬಂದವರು ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದು, ಇಬ್ಬರ ಮಧ್ಯೆ ಕೆಲ ಸಮಯದವರೆಗೆ ವಾಗ್ವಾದ ನಡೆದಿದ್ದು, ಯುವಕ ಮಹಿಳೆಗೆ ಚೂರಿಯಿಂದ ಮುಖ ಸೇರಿ ದೇಹದ ಹಲವು ಕಡೆಗೆ ಇರಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಸುಮಾರು ಅರ್ಧ ತಾಸು ರಸ್ತೆಯಲ್ಲೇ ಬಿದ್ದಿದ್ದರೆನ್ನಲಾಗಿದೆ. ಬಳಿಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದರೂ, ರಕ್ತ ಸ್ರಾವದಿಂದ ಮೃತಪಟ್ಟಿದ್ದಾರೆ.
ಯುವಕ ರಿಕ್ಷಾದಲ್ಲಿ ಪರಾರಿಯಾಗಿದ್ದು, ಜನ ನಿಬಿಡ ಸ್ಥಳದಲ್ಲಿ ಘಟನೆ ನಡೆದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಾಸಿನ ವಿಚಾರಕ್ಕೆಯಾ ಅಥವಾ ಪ್ರೀತಿ ಪ್ರೇಮದ ವಿಚಾರಕ್ಕೆ ಈ ಘಟನೆ ನಡೆಯಿತಾ ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ.
ಮಹಿಳೆ ಅಂತರ್ಜಾತಿಯ ವಿವಾಹವಾಗಿದ್ದು ಮೂವರು ಮಕ್ಕಳನ್ನು ಹೊಂದಿದ್ದಾರೆ. ಅವರು ಪತಿ ಸೆಂಟ್ರಿಗ್ ಕೆಲಸ ಮಾಡಿಕೊಂಡಿದ್ದಾರೆ. ಮಹಿಳೆ ಹಾಗೂ ಆಕೆಯ ಸಹೋದರಿ ಸೇರಿ ಈ ಸಣ್ಣ ಕ್ಯಾಂಟಿನ್ ಹೊಟೇಲ್ ನಡೆಸುತ್ತಿದ್ದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಗಮಿಸಿದ್ದು, ಪೊಲೀಸರು ಅವರ ಬಂದೋಬಸ್ತಿನಲ್ಲಿದ್ದ ಕಾರಣ ಸ್ಥಳಕ್ಕೆ ತಲುಪುವಾಗ ಸಾಕಷ್ಟು ಸಮಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ರಿಕ್ಷಾ ಚಿತ್ರ ವೈರಲ್!
ಯುವಕ ಮಹಿಳೆಗೆ ಇರಿದು ಓಡುತ್ತಿರುವ ಸಂದರ್ಭ ಬಸ್ ಚಾಲಕರೊಬ್ಬರು ವಿಡಿಯೋ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ರಿಕ್ಷಾದ ದಾಖಲೆ ಅನ್ಯ ಕೋಮಿಗೆ ಸೇರಿದವನು ಎಂಬುದು ವೈರಲ್ ಗೆ ಕಾರಣವಾಗಿದೆ.