ಹೊಸದಿಗಂತ ವರದಿ ಹುಬ್ಬಳ್ಳಿ:
ಕೆಲವು ಆಂತರಿಕ ಗೊಂದಲದಿಂದಾಗಿ ಸಭಾಪತಿ ಹುದ್ದೆ ನನಗೆ ದೊರೆಯುವುದು ಕೊಂಚ ವಿಳಂಬವಾಗಿದೆ. ಬರುವ ದಿನದಲ್ಲಿ ನನಗೆ ಸಭಾಪತಿ ಹುದ್ದೆ ದೊರೆಯುವ ಸಂಪೂರ್ಣ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಸಹ ಸಭಾಪತಿ ಸ್ಥಾನ ಕೊಡುತ್ತಾರೋ ಇಲ್ಲವೋ ಎಂಬ ಗೊಂದಲವಿತ್ತು. ಆದರೆ ಅದೆಲ್ಲವೂ ಈಗ ನಿವಾರಣೆಯಾಗಿದ್ದು, ಬಿಜೆಪಿಯಲ್ಲಿನ ವಾತಾವರಣ ಈಗ ಸಂಪೂರ್ಣ ತಿಳಿಯಾಗಿದೆ ಎಂದರು.
ಈಗಾಗಲೇ ಕೋರ್ ಕಮೀಟಿಯಲ್ಲಿ (ಅ.6ರಂದು) ನಡೆದ ಚರ್ಚೆಯಲ್ಲಿ ನನಗೆ ಸಭಾಪತಿ ಸ್ಥಾನ ನೀಡುವುದಾಗಿ ತೀರ್ಮಾಣ ಮಾಡಲಾಗಿದೆ. 31ಜನ ವಿಧಾನ ಪರಿಷತ್ ಸದಸ್ಯರಲ್ಲಿ 27 ಜನರು ನನ್ನ ಪರವಾಗಿ ಹೇಳಿದ್ದಾರೆ. ಉಳಿದವರನ್ನು ಮನವೊಲಿಸುವ ಕೆಲಸವನ್ನು ಬಿಜೆಪಿ ಪಕ್ಷದ ನಾಯಕರು ಮಾಡಿದ್ದಾರೆ ಎಂದರು.
ಹಿಜಾಬ್ ವಿಷಯದಲ್ಲಿ ನ್ಯಾಯಾಲಯ ನೀಡುವ ತೀರ್ಪನ್ನು ಪ್ರತಿಯೊಬ್ಬರು ಅನುಸರಿಸಬೇಕಾದದ್ದು ಆದ್ಯ ಕರ್ತವ್ಯವಾಗಿದೆ. ಅದನ್ನು ಯಾವುದೇ ರೀತಿಯಿಂದಲೂ ಯಾರು ವಿರೋಸಲು ಬರುವುದಿಲ್ಲ. ಈಗಾಗಲೇ ಹಿಜಾಬ್ ಕುರಿತು ಹೈಕೋರ್ಟ್ ಸೂಕ್ತ ಆದೇಶ ಸಹ ನೀಡಿದೆ. ಈಗ ಸುಪ್ರೀಂ ಕೋರ್ಟ್ನ ದ್ವಿಸದಸ್ಯ ಪೀಠ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದೆ. ತೀರ್ಪು ಏನು ಬರುತ್ತದೆ ಕಾಯ್ದು ನೋಡಬೇಕಿದೆ.