ಹೊಸದಿಗಂತ ವರದಿ, ಮದ್ದೂರು :
ತಾಲೂಕಿನ ಆತಗೂರು ಹೋಬಳಿ ಮಾರದೇವನಹಳ್ಳಿ ಸಾಮಾಜಿಕ ಅರಣ್ಯ ಪ್ರದೇಶದ ಗೋಮಾಳಕ್ಕೆ ಕಿಡಿಗೇಡಿಗಳ ಕೃತ್ಯದಿಂದ ಬೆಂಕಿ ಬಿದ್ದು ಸುಮಾರು 50 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ವಿವಿಧ ಜಾತಿಯ ಲಕ್ಷಾಂತರ ರೂ. ವೌಲ್ಯದ ವಿವಿಧ ಜಾತಿಯ ಮರಗಳು ಬೆಂಕಿಗೆ ಆಹುತಿಯಾಗಿವೆ.
ಅಗ್ನಿಶಾಮಕ ದಳದ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಮದ್ದೂರು ಹಾಗೂ ಚನ್ನಪಟ್ಟಣ ಗಡೀ ಭಾಗಕ್ಕೆ ಹೊಂದಿಕೊಂಡಂತಿರುವ ಮಾರದೇವನಹಳ್ಳಿ-ಹೊಸಹಳ್ಳಿ ಬೆಟ್ಟ ಗುಡ್ಡದ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಕಿಡಿಗೇಡಿಗಳ ಕೃತ್ಯದಿಂದಾಗಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಗಾಳಿಯ ರಭಸಕ್ಕೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಇಡೀ ಅರಣ್ಯಕ್ಕೆ ವ್ಯಾಪಿಸಿದ ಕಾರಣ ಬೆಳೆಯಲಾಗಿದ್ದ ತೇಗ, ಹರ್ಕ್ಯೂಲೇಸ್, ನೀಲಗಿರಿ, ಬುಗುರಿ ಮರಗಳು ಸೇರಿದಂತೆ ವಿವಿಧ ಜಾತಿಯ ಮರಗಳು ಅಗ್ನಿಗೆ ಆಹುತಿಯಾಗಿ ಲಕ್ಷಾಂತರ ರೂ. ಹಾನಿ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಅಲ್ಲದೆ, ಸಾಮಾಜಿಕ ಅರಣ್ಯ ಪ್ರದೇಶದ ಬೆಟ್ಟದ ತಪ್ಪಲಲ್ಲಿರುವ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿದ್ದ ತೇಗ, ಹುಣಸೆ, ನೆಲ್ಲಿಕಾಯಿ ಮರಗಳು ಬೆಂಕಿಯಿಂದ ಸುಟ್ಟುಹೋಗಿವೆ.