ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಬಿಎಂಪಿ ಕಸದ ಲಾರಿಯೊಂದು ಬೈಕ್ ಸವಾರನ ಮೇಲೆ ಉರುಳಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮೂಗೇನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಮೃತ ಬೈಕ್ ಸವಾರನನ್ನು ಮಾವಿನಕುಂಟೆ ನಿವಾಸಿ ರಾಜು (32) ಎಂದು ಗುರುತಿಸಲಾಗಿದೆ.
ಬಿಬಿಎಂಪಿ ಕಸದ ಲಾರಿಗೆ ಸಿಲುಕಿ ಯುವಕ ಸಾವನ್ನಪ್ಪಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಸೂಕ್ತ ನ್ಯಾಯ ಸಿಗುವವರೆಗೂ ಶವ ತೆರವು ಮಾಡುವುದಿಲ್ಲವೆಂದು ಗ್ರಾಮಸ್ದರು ಪ್ರತಿಭಟನೆಗೆ ಮುಂದಾಗಿದ್ದು, ಶಾಸಕ ಟಿ ವೆಂಕಟರಮಣಯ್ಯ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು.
ತರಬೇತಿ ಇಲ್ಲದ ಚಾಲಕ, ಗುಜಿರಿ ಲಾರಿಗಳು:
ಬಿಬಿಎಂಪಿ ಕಸ ಸಂಗ್ರಹವೇ ಒಂದು ದೊಡ್ಡ ಮಾಫಿಯಾವಾಗಿ ಬೆಳೆದಿದೆ. ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಬಿಬಿಎಂಪಿಯು ಕಸದ ಲಾರಿಗಳಿಗೆ ನುರಿತ ಚಾಲಕರ ನೇಮಕ ಮಾಡುತ್ತಿಲ್ಲ ಮತ್ತು ಕಸ ಸಂಗ್ರಹಕ್ಕೆ ಗುಜಿರಿ ಲಾರಿಗಳನ್ನು ಬಳಕೆ ಮಾಡಲಾಗುತ್ತಿದೆ. ಇದರಿಂದ ಹಲವು ಅಮಾಯಕರು ಜೀವ ಕಳೆದುಕೊಳ್ಳುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ