ಹೊಸದಿಗಂತ ವರದಿ ಕಲಬುರಗಿ:
ರಸಗೊಬ್ಬರ ಕೊರತೆಯಾಗುವುದರ ಜತೆಗೆ ಎಂಆರ್ಪಿಗಿಂತ ಹೆಚ್ವಿಗೆ ದರದಲ್ಲಿ ಮಾರಾಟವಾಗದಂತೆ ನೋಡಿಕೊಳ್ಳಿ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿರುವ ದೂರುಗಳು ಬಂದಿವೆ. ಆದ್ದರಿಂದ ತಂಡವನ್ನು ರೂಪಿಸಿ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಹು ಮುಖ್ಯವಾಗಿ ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕು. ರಸಗೊಬ್ಬರ ದಾಸ್ತಾನು ಇದೆ ಹೀಗಾಗಿ ಸುಗಮವಾಗಿ ಸರಬರಾಜುವಾಗುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಕೇಂದ್ರದ ಸಚಿವ ಖೂಬಾ ಹಾಗೂ ಸಂಸದ ಡಾ. ಉಮೇಶ ಜಾಧವ್ ಎಚ್ಚರಿಕೆ ನೀಡಿದರು.
ಪಿಎಂ ಕಿಸಾನ್ ಫಲಾನಿಭವಿಗಳ ಪಟ್ಟಿ ಸಲ್ಲಿಸಿ:
ಕೇಂದ್ರದ ಯೋಜನೆಗಳ ಪ್ರತಿಯೊಂದರ ಕುರಿತಾಗಿ ತಮಗೆ ವರದಿ ಸಲ್ಲಿಸಿ. ಅದರಲ್ಲೂ ಪ್ರಮುಖವಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ತಾಲೂಕುವಾರು ಸಮಗ್ರ ವಿವರಣೆ ನೀಡುವಂತೆ ಸೂಚಿಸಿದರು.
ವರ್ತುಲ ರಸ್ತೆ ಅತಿಕ್ರಮಣ ತೆರವುಗೊಳಿಸಿ:
ಕಲಬುರಗಿ ಮಹಾನಗರದ ವರ್ತುಲ ರಸ್ತೆ ಅತಿಕ್ರಮಣ ತೆರವುಗೊಳಿಸಬೇಕು. ಕಳೆದ ಸಭೆಯಲ್ಲೇ ಸೂಚಿಸಲಾಗಿತ್ತು. ಇನ್ನೂ ಯಾಕೆ ಆಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಸಭುಬು ಹೇಳಿದ ಅಧಿಕಾರಿಗಳನ್ನು ತರಾಟೆಗೆ ತೆಎದುಕೊಂಡ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಕಳೆದ ಸಲವೂ ಹೀಗೆ ಹೇಳಿದ್ದೀರಿ, ಕೆಲಸ ಮಾಡುವ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದರು. ಎರಡು ದಿನದೊಳಗೆ ಡಿಸಿ ಅಧ್ಯಕ್ಷ ತೆಯಲ್ಲಿ ಸಭೆ ನಡೆಸಿ ಕಾರ್ಯಾಚರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.