ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣದ ಕುರಿತು ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
ರಾಜಕೀಯ ದ್ವೇಷದಿಂದ ಕೊಲೆ ನಡೆದಿದೆ
ಇದೊಂದು ವ್ಯವಸ್ಥಿತ ಕೊಲೆ, ರಾಜಕೀಯ ದ್ವೇಷದಿಂದ ಕೊಲೆ ನಡೆದಿದೆ. ಅವರಿಗೆ ದ್ವೇಷ ಇದ್ದರೆ ನನ್ನನ್ನು ಬಲಿ ಪಡೆಯಬಹುದಿತ್ತು, ನನ್ನ ಮೇಲಿನ ದ್ವೇಷದಿಂದ ಪುತ್ರನನ್ನು ಬಲಿ ತೆಗೆದುಕೊಂಡಿದ್ದಾರೆ, ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಪುತ್ರ ಚಂದ್ರಶೇಖರ್ ಗೆ ಯಾರೂ ಶತ್ರುಗಳಿರಲಿಲ್ಲ, ಆತನನ್ನು ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದು ಆಕ್ಸಿಡೆಂಟ್ ಅಲ್ಲ ಕೊಲೆ
ಚಂದ್ರಶೇಖರ್ ಸಾವಿನ ಬಗ್ಗೆ ಬಿಜೆಪಿ BJP ಶಾಸಕ ಮಾಡಾಳು ವಿರೂಪಾಕ್ಷಪ್ಪ ಸ್ಪೋಟಕ ಹೇಳಿಕೆ ನೀಡಿದ್ದು, ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ ಶಾಸಕರು, ಘಟನೆಯಿಂದ ಬಹಳ ಬೇಜಾರಾಗಿದೆ. ಇದು ಆಕ್ಸಿಡೆಂಟ್ ಅಲ್ಲ ಕೊಲೆ ಎಂದು ಹೇಳಿದ್ದಾರೆ. ಇದು ಆಕ್ಸಿಡೆಂಟ್ ಆಗೋಕೆ ಸಾಧ್ಯವಿಲ್ಲ, ಎಷ್ಟೇ ವೇಗವಾಗಿ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದರೂ ತುಂಗಾ ನಾಲೆಗೆ ಬೀಳಲು ಸಾಧ್ಯವಿಲ್ಲ. ಚಂದ್ರುವನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕುಟುಂಬಸ್ಥರು ನೀಡುವ ದೂರಿನಂತೆ ತನಿಖೆ ನಡೆಯುತ್ತದೆ: ಸಿಎಂ
ಘಟನೆ ಬಗ್ಗೆ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿ, ಕುಟುಂಬಸ್ಥರು ನೀಡುವ ದೂರಿನಂತೆ ತನಿಖೆ ನಡೆಯುತ್ತದೆ, ಶಾಸಕ ರೇಣುಕಾಚಾರ್ಯ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ತನಿಖೆ ಬಗ್ಗೆ ಚಂದ್ರಶೇಖರ್ ತಂದೆ ಅಭಿಪ್ರಾಯ ಪಡೆಯುತ್ತೇವೆ , ಕುಟುಂಬಸ್ಥರು ನೀಡುವ ದೂರಿನಂತೆ ತನಿಖೆ ನಡೆಯುತ್ತದೆ ಎಂದು ಹೇಳಿದ್ದಾರೆ.