ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ತಂಗಡಿ ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿದ್ದು ಮುಂಡಾಜೆ ಹಾಗೂ ಆಸು ಪಾಸಿನ ಗ್ರಾಮಗಳ ಅಲ್ಲಲ್ಲಿ ಕೆಲವೊಂದು ಸಣ್ಣಪುಟ್ಟ ಅನಾಹುತಗಳು ಸಂಭವಿಸುತ್ತಿವೆ. ಮುಂಡಾಜೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಭಿಡೆ ಕ್ರಾಸ್ ಎಂಬಲ್ಲಿ ಶಕುಂತಲಾ ಮೆಹಂದಳೆ ಅವರ ಮನೆಯ ಹಿಂಭಾಗದ ಗುಡ್ಡ ಕುಸಿದು ಮಳೆ ನೀರು ಮನೆಯ ಹಿಂಭಾಗದ ಜಗಲಿಯನ್ನು ಆವರಿಸಿದೆ. ಸ್ಥಳೀಯರು ಹೆಚ್ಚಿನ ಹಾನಿ ಉಂಟಾಗದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.
ಮುಂಡಾಜೆ ಕಲ್ಮಂಜ ಮೂಲಕ ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರ ಒಂದು ರಸ್ತೆಗೆ ಉರುಳಿ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ದಿಡುಪೆ ಸಮೀಪದ ಮನೆಯೊಂದರ ಪಕ್ಕದ ಗುಡ್ಡ ಕುಸಿತವಾದ ಬಗ್ಗೆ ತಿಳಿದುಬಂದಿದೆ. ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಕಾಪು ಎಂಬಲ್ಲಿ ಮರದ ರೆಂಬೆಯ ಒಂದು ಮುರಿದು ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಉಜಿರೆಯ ಶಿವಾಜಿನಗರ ಸಮೀಪ ಭಾಸ್ಕರ ಎಂಬವರ ಮನೆ ಪಕ್ಕದ ಗುಡ್ಡ ಕುಸಿತವಾಗಿದ್ದು ಮಣ್ಣು ಮನೆಯ ಗೋಡೆಯನ್ನು ಆವರಿಸಿದೆ. ಮತ್ತೆ ಮಳೆ ವಿಪರೀತವಾಗಿ ಮುಂದುವರಿದಿದೆ. ತಾಲೂಕಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು ಗ್ರಾಹಕರ ಪರದಾಟ ಮುಂದುವರಿದಿದೆ.