ಹೊಸದಿಗಂತ ವರದಿ, ಕಾಸರಗೋಡು:
ಶನಿವಾರ ಬೆಳಗ್ಗೆಯಿಂದ ಕಾಸರಗೋಡು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಳರಿಕುಂಡು ಈ ನಾಲ್ಕು ತಾಲೂಕುಗಳಲ್ಲೂ ಬಿರುಸಿನ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ಯಗೊಂಡಿದೆ. ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ಜಲಾಶಯಗಳಲ್ಲಿ ನೀರಿನ ಹರಿವು ಏರಿಕೆಯಾಗುತ್ತಿದ್ದು , ಕೆಲವು ಭಾಗಗಳಲ್ಲಿ ರಸ್ತೆಯಲ್ಲೇ ಮಳೆನೀರು ಹರಿದು ಸಮಸ್ಯೆ ಸೃಷ್ಟಿಯಾಗಿದೆ. ಇನ್ನೊಂದೆಡೆ ಕಾಮಗಾರಿ ನಡೆಯುತ್ತಿರುವ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆಲವು ರಾಜ್ಯ ಹೆದ್ದಾರಿಗಳಲ್ಲಿ ಬೆಳಗ್ಗೆಯಿಂದ ವಾಹನ ದಟ್ಟಣೆ ಕಂಡುಬರುತ್ತಿದ್ದು , ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದಾರೆ.
ಈ ಮಧ್ಯೆ ಸೀತಾಂಗೋಳಿ ಪೇಟೆಯಲ್ಲಿ ಸ್ವಚ್ಛ ಭಾರತ್ ಯೋಜನೆಯಡಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಶೌಚಾಲಯ ಸಮುಚ್ಛಯದ ಮೇಲ್ಛಾವಣಿ ಇಂದು ಬೆಳಗ್ಗೆ ಬೀಸಿದ ಬಿರುಗಾಳಿಗೆ ಸಂಪೂರ್ಣವಾಗಿ ಕಟ್ಟಡದಿಂದ ಬೇರ್ಪಟ್ಟು 10 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದೆ.
ಜಿಲ್ಲಾ ನಿರ್ಮಿತಿ ಕೇಂದ್ರವು ಈ ಕಟ್ಟಡದ ಕಾಮಗಾರಿಯ ನೇತೃತ್ವ ವಹಿಸಿದೆ. ಪ್ರಥಮ ಹಂತದಲ್ಲಿ ಅತ್ಯಂತ ವೇಗವಾಗಿ ನಿರ್ಮಾಣ ಕೆಲಸ ನಡೆದರೂ ಕಳೆದ ಎರಡು ತಿಂಗಳುಗಳಿಂದ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ಅಳವಡಿಸಿದ ಕಬ್ಬಿಣದ ಮಾಡು ಬದಲಿಸಿ ಕಾಂಕ್ರೀಟ್ ಮಾಡು ನಿರ್ಮಿಸಬೇಕೆಂದು ಬಿಜೆಪಿ ವಾರ್ಡ್ ಸಮಿತಿ ಪ್ರಮುಖರು ಹಾಗೂ ವಾರ್ಡ್
ಜನಪ್ರತಿನಿಧಿ ಆಗ್ರಹಿಸುತ್ತಲೇ ಬಂದಿದ್ದರು. ಆದರೆ ಇದೀಗ ಅಸಮರ್ಪಕ ಮೇಲ್ಛಾವಣಿಯು ಸಂಪೂರ್ಣವಾಗಿ ಕುಸಿದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ