May 26, 2026
Tuesday, May 26, 2026
spot_img

ಬೆಂಗಳೂರು-ಬಿಹಾರ ರೈಲಿನಲ್ಲಿ ಭಾರೀ ಪ್ರಮಾದ: 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದಾಗಲೇ ಬೇರ್ಪಟ್ಟ ಬೋಗಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿಲಿಕಾನ್ ಸಿಟಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ದಾನಪೂರ್ ವಿಶೇಷ ರೈಲಿನಲ್ಲಿ ಚಲಿಸುತ್ತಿರುವಾಗಲೇ ಬೋಗಿಗಳು ಪರಸ್ಪರ ಬೇರ್ಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಅದೃಷ್ಟವಶಾತ್ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಧ್ಯರಾತ್ರಿ ನಡೆದಿದ್ದೇನು?
ರೈಲ್ವೆ ಮೂಲಗಳ ಪ್ರಕಾರ, ಬೆಂಗಳೂರಿನ ಎಸ್‌ಎಂವಿಟಿ (SMVT) ನಿಲ್ದಾಣದಿಂದ ಬಿಹಾರದ ದಾನಪೂರ್‌ಗೆ ಹೊರಟಿದ್ದ ಈ ವಿಶೇಷ ರೈಲು ಮೇ 24ರಂದು ಆಂಧ್ರಪ್ರದೇಶದ ವಿಜಯವಾಡ ನಿಲ್ದಾಣವನ್ನು ದಾಟಿ ಮುನ್ನಡೆಯುತ್ತಿತ್ತು. ವಿಜಯವಾಡದಿಂದ ಸುಮಾರು 30 ಕಿಲೋಮೀಟರ್ ಕ್ರಮಿಸಿದ ನಂತರ, ತಡರಾತ್ರಿ 1 ಗಂಟೆಯ ಸುಮಾರಿಗೆ ರೈಲಿನ ಬೋಗಿಗಳನ್ನು ಪರಸ್ಪರ ಜೋಡಿಸುವ ಜಾಯಿಂಟ್ ವೀಲ್ (ಕಪ್ಲಿಂಗ್) ಇದ್ದಕ್ಕಿದ್ದಂತೆ ಕಟ್ ಆಗಿದೆ.

ರೈಲು ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರಣ, ಕಪ್ಲಿಂಗ್ ಕಟ್ ಆದ ತಕ್ಷಣ ಇಂಜಿನ್ ಇದ್ದ ಮುಂಭಾಗದ ಬೋಗಿಗಳು ಮುಂದೆ ಸಾಗಿದ್ದು, ಪ್ರಯಾಣಿಕರಿದ್ದ ಹಿಂಭಾಗದ ಬೋಗಿಗಳು ತಾನಾಗಿಯೇ ಬೇರ್ಪಟ್ಟಿವೆ.

ತಪ್ಪಿದ ಭಾರೀ ಅನಾಹುತ
ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಬೋಗಿಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವ ಅಥವಾ ಹಳಿತಪ್ಪುವ ಅಪಾಯವಿರುತ್ತದೆ. ಆದರೆ, ಬೋಗಿಗಳು ಬೇರ್ಪಟ್ಟ ತಕ್ಷಣ ರೈಲಿನಲ್ಲಿದ್ದ ಆಧುನಿಕ ಆಟೋಮ್ಯಾಟಿಕ್ ಏರ್ ಬ್ರೇಕ್ ವ್ಯವಸ್ಥೆಯು ಚಾಲನೆಗೊಂಡಿದೆ. ಇದರಿಂದಾಗಿ ಹಿಂಭಾಗದ ಬೋಗಿಗಳು ಯಾವುದೇ ಅಪಘಾತಕ್ಕೆ ಈಡಾಗದೆ ರಸ್ತೆಯ ಮಧ್ಯದಲ್ಲೇ ಸುರಕ್ಷಿತವಾಗಿ ನಿಂತಿವೆ. ಲೋಕೋಪೈಲಟ್ ಕೂಡ ತಕ್ಷಣವೇ ರೈಲನ್ನು ನಿಯಂತ್ರಣಕ್ಕೆ ತಂದಿದ್ದಾರೆ.

4 ಗಂಟೆಗಳ ಕಾಲ ರೈಲು ಸಂಚಾರ ವಿಳಂಬ
ಘಟನೆ ಸಂಭವಿಸುತ್ತಿದ್ದಂತೆ ರೈಲಿನಲ್ಲಿದ್ದ ತಾಂತ್ರಿಕ ಸಿಬ್ಬಂದಿ ಮತ್ತು ರೈಲ್ವೆ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಸುಮಾರು ನಾಲ್ಕು ಗಂಟೆಗಳ ನಿರಂತರ ಶ್ರಮದ ನಂತರ ಕಪ್ಲಿಂಗ್ ದೋಷವನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ, ಬೋಗಿಗಳನ್ನು ಮರುಜೋಡಣೆ ಮಾಡಲಾಯಿತು. ಈ ತಾಂತ್ರಿಕ ಕಾರ್ಯಾಚರಣೆಯಿಂದಾಗಿ ದಾನಪೂರ್ ವಿಶೇಷ ರೈಲಿನ ಸಂಚಾರವು 4 ಗಂಟೆಗಳಿಗೂ ಹೆಚ್ಚು ಕಾಲ ವಿಳಂಬವಾಗಿತ್ತು. ಅದೃಷ್ಟವಶಾತ್, ಈ ಇಡೀ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ರೈಲ್ವೆ ಇಲಾಖೆ ಖಚಿತಪಡಿಸಿದೆ.

ಆದಾಗ್ಯೂ, ಎಸ್‌ಎಂವಿಟಿ ನಿಲ್ದಾಣದಿಂದ ಹೊರಡುವ ಮುನ್ನ ರೈಲಿನ ಸುರಕ್ಷತೆಯನ್ನು ಸರಿಯಾಗಿ ತಪಾಸಣೆ ಮಾಡಲಾಗಿತ್ತೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತು ಪ್ರಯಾಣಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ರೈಲ್ವೆ ಇಲಾಖೆ ಈ ಕುರಿತು ಆಂತರಿಕ ತನಿಖೆಗೆ ಆದೇಶಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !