ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು : ಸೂಕ್ತ ಹವಾಮಾನ ಪರಿಸ್ಥಿತಿ ಮತ್ತು ಅತ್ಯುತ್ತಮ ಕ್ರೀಡಾ ಮೂಲಸೌಕರ್ಯಗಳಿಂದಾಗಿ ಬೆಂಗಳೂರನ್ನು ಶೀಘ್ರದಲ್ಲೇ ಭಾರತದ ಕ್ರೀಡಾ ಕೇಂದ್ರ ಎಂದು ಕರೆಯಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿರುವ ಕ್ರೀಡೆ ಮತ್ತು ಅಥ್ಲೆಟಿಕ್ಸ್ ಬಗೆಗಿನ ಉತ್ಸಾಹವನ್ನು ಸಚಿವರು ಶ್ಲಾಘಿಸಿದರು. ಅನುಭವಿ ಕ್ರೀಡಾಪಟುಗಳು ಸಕ್ರಿಯವಾಗಿ ತಮ್ಮದೇ ಆದ ಅಕಾಡೆಮಿಗಳನ್ನು ಪ್ರಾರಂಭಿಸುತ್ತಿದ್ದಾರೆ, ಜ್ಞಾನವನ್ನು ರವಾನಿಸುತ್ತಿದ್ದಾರೆ, ತರಬೇತಿ ಅಥವಾ ಮೌಲ್ಯಮಾಪನ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದಾರೆ, ಕ್ರೀಡೆಯಲ್ಲಿ ದೇಶದ ಹೊಸ ಪ್ರಾಬಲ್ಯಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮೈ ಭಾರತ್ ಪೋರ್ಟಲ್ನಲ್ಲಿ ನೋಂದಾಯಿಸಲು, ಸ್ವಯಂಸೇವಾ ಚಟುವಟಿಕೆಯನ್ನು ಕೈಗೊಳ್ಳಲು, ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ವೇದಿಕೆಯನ್ನು ಬಳಸಿಕೊಳ್ಳಲು, ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಉಪಕ್ರಮಗಳನ್ನು ಪೋಸ್ಟ್ ಮಾಡಲು ಮತ್ತು ಮೈ ಭಾರತ್ ಉಪಕ್ರಮದ ಲಾಭ ಪಡೆಯಲು ಇತರರನ್ನು ಪ್ರೇರೇಪಿಸಸುವ ಬಗ್ಗೆ ಶ್ರೀ ಠಾಕೂರ್ ಒತ್ತು ನೀಡಿದರು. ದೇಶದಾದ್ಯಂತ ಯುವಜನರ ಮೇಲೆ ಪ್ರಭಾವ ಬೀರಲು ಮೈ ಭಾರತ್ ನ ಭಾಗವಾಗಿ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸ್ಪೂರ್ತಿದಾಯಕ ಕಥೆಗಳನ್ನು ಪೋಸ್ಟ್ ಮಾಡುವಂತೆ ಸಚಿವರು ಕ್ರೀಡಾಪಟುಗಳನ್ನು ಒತ್ತಾಯಿಸಿದರು.
ಮೊದಲ ಖೇಲೋ ಇಂಡಿಯಾ ಪ್ಯಾರಾ ಕ್ರೀಡಾಕೂಟವನ್ನು ಪ್ರಸ್ತಾಪಿಸಿದ ಅವರು, ಅಲ್ಲಿ 3000 ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಭಾಗವಹಿಸಿದ್ದರು. ಮುಂಬರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟವು ತಮಿಳುನಾಡಿನಲ್ಲಿ ನಡೆಯಲಿದೆ ಎಂದು ಸಚಿವರು ಹೇಳಿದರು.
ಖೇಲೋ ಇಂಡಿಯಾ ಎಂಬುದು ಪ್ರತಿಭೆಗಳನ್ನು ಗುರುತಿಸುವ, ಅವರನ್ನು ಪೋಷಿಸುವ, ಟಾರ್ಗೆಟ್ ಒಲಂಪಿಕ್ ಪೋಡಿಯಂ ಸ್ಕೀಮ್ ಮೂಲಕ ಅವರು ಉತ್ಕೃಷ್ಟರಾದಾಗ ಬೆಂಬಲ ನೀಡುವ ಯೋಜನೆಯಾಗಿದೆ, ಇವೆಲ್ಲವೂ ಅಭಿವೃದ್ಧಿ ಹೊಂದಿದ ಭಾರತ – ವಿಕಸಿತ ಭಾರತ ಪರಿಕಲ್ಪನೆಗೆ ಕೊಡುಗೆ ನೀಡುತ್ತಿವೆ ಎಂದು ಅವರು ಹೇಳಿದರು.
ಈ ವೇಳೆ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ 330 ಹಾಸಿಗೆ ಮತ್ತು 300 ಹಾಸಿಗೆಗಳ ಎರಡು ಹಾಸ್ಟೆಲ್ ಕಟ್ಟಡಗಳು ಮತ್ತು 400 ಮೀಟರ್ ಸಿಂಥೆಟಿಕ್ ಅಥ್ಲೆಟಿಕ್ಸ್ ಟ್ರ್ಯಾಕ್ ಅನ್ನು ಉದ್ಘಾಟಿಸಿದರು.
ಖೇಲೋ ಇಂಡಿಯಾ ಯೋಜನೆಯಡಿ 26.77 ಕೋಟಿ ರೂ. ವೆಚ್ಚದಲ್ಲಿ ಪುರುಷರಿಗಾಗಿ 300 ಹಾಸಿಗೆಗಳ ಹಾಸ್ಟೆಲ್ ಪೂರ್ಣಗೊಂಡಿದೆ. ಅಂದಾಜು ಒಂದು ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಹಾಸ್ಟೆಲ್, ನೆಲ + 4 ಮಹಡಿಗಳಲ್ಲಿದೆ. ಅದರ ನಿವಾಸಿಗಳ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ಆಧುನಿಕ ಸೌಕರ್ಯಗಳನ್ನು ಹೊಂದಿದೆ.
ಖೇಲೋ ಇಂಡಿಯಾ ಅಡಿಯಲ್ಲಿ 13.86 ಕೋಟಿ ರೂ. ಯೋಜನಾ ವೆಚ್ಚದೊಂದಿಗೆ ನಿರ್ಮಿಸಲಾಗಿರುವ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, 400 ಮೀ, 8 ಪಥ ಮತ್ತು ಹುಲ್ಲಿನ ಒಳಭಾಗದೊಂದಿಗೆ ನೇರವಾಗಿ ಹೆಚ್ಚುವರಿ ಎರಡು ಪಥಗಳನ್ನು ಒಳಗೊಂಡಿದೆ. ಸಿಂಥೆಟಿಕ್ ಟ್ರ್ಯಾಕ್ ಪೂರ್ಣ PUR ನೊಂದಿಗೆ ಮತ್ತು ವರ್ಗ-1, ವರ್ಗ-5 ಗಾಗಿ IAAF ಪ್ರಮಾಣೀಕರಣವನ್ನು ಹೊಂದಿದೆ. 8 ಪೂರ್ಣ ಲೇನ್ ಮತ್ತು 2 ಲೇನ್ ಸಿಂಥೆಟಿಕ್ ಟ್ರ್ಯಾಕ್ಗಳ ಹೊರತಾಗಿ, ಈ ಯೋಜನೆಯು ಹೆಚ್ಚಿನ ಕಾರ್ಯಕ್ಷಮತೆಯ ತರಬೇತಿಗಾಗಿ 500 ಮೀ. ಆವೆಮಣ್ಣಿನ ಟ್ರ್ಯಾಕ್ ಮತ್ತು 100 ಮೀ. ಮರಳಿನ ಟ್ರ್ಯಾಕ್ ಅನ್ನು ಒಳಗೊಂಡಿದೆ. ಅಥ್ಲೆಟಿಕ್ ಟ್ರ್ಯಾಕ್ ನ ಮೇಲ್ಮೈ ಕೆಳಗೆ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಸಂಯೋಜಿತವಾಗಿರುವ ಟೈಮಿಂಗ್ ಗೇಟ್ಸ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಹೊಂದಿದೆ. ಇದು ಅಥ್ಲೆಟಿಕ್ಸ್ ತರಬೇತಿ ಸೌಲಭ್ಯಕ್ಕಾಗಿ ಪೆರಿಮೀಟರ್ ಫೆನ್ಸಿಂಗ್ ನೊಂದಿಗೆ 250 ಲಕ್ಸ್ ಹೈ ಮಾಸ್ಟ್ ಗಳನ್ನು ಹೊಂದಿದೆ.ಮೂರು ಸೌಲಭ್ಯಗಳ ಉದ್ಘಾಟನೆಯು ಸಾಯ್ ಕೇಂದ್ರಕ್ಕೆ ಒಂದು ನಿರ್ಣಾಯಕ ಕ್ಷಣವಾಗಿದೆ. ಇದರ ವಸತಿ ಸಾಮರ್ಥ್ಯ 1245 ಕ್ಕೆ ತಲುಪುತ್ದೆ ಮತ್ತು ಸಾಯ್ ಬೆಂಗಳೂರಿಗೆ ಹೊಸ ಸ್ಮಾರ್ಟ್ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಅನ್ನು ಸೇರ್ಪಡೆಯಾಗಿದೆ.
ಖ್ಯಾತ ಕ್ರೀಡಾ ಪಟುಗಳಾದ ಅಶ್ವಿನಿ ನಾಚಪ್ಪ, ಎಸ್ ಡಿ ಈಶಾನ್ ಮತ್ತಿತರರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮೈ ಭಾರತ್ ಸಂವಾದದ ಭಾಗವಾಗಿ, ಠಾಕೂರ್ ಅವರು ಎನ್ ವೈ ಕೆ ಎಸ್ ಗೆ ಸಂಬಂಧಿಸಿದ ಯುವಜನರು, ಸಾಯ್ ಅಧಿಕಾರಿಗಳು, ಖ್ಯಾತ ಕ್ರೀಡಾಪಟುಗಳು, ಏಷ್ಯನ್ ಕ್ರೀಡಾಕೂಟ ಪದಕ ವಿಜೇತರಾದಪ್ರೀತ್ ಸಿಂಗ್, ಅವಿನಾಶ್ ಸೇಬಲ್,ಪಾರುಲ್, ಪ್ರಿಯಾಂಕಾ ಗೋಸ್ವಾಮಿ, ಆನ್ಸಿ ಸೋಜನ್ ಸೇರಿದಂತೆ ನೆರೆದಿದ್ದ ಸುಮಾರು 1100 ಮಂದಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.