ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಎಫ್ಸಿ ತಂಡವು ಗುರುವಾರ ಕೋಲ್ಕತ್ತಾದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಆಸ್ಕರ್ ಬ್ರೂಜೋನ್ ಅವರ ಈಸ್ಟ್ ಬೆಂಗಾಲ್ ಎಫ್ಸಿ ತಂಡವನ್ನು ಎದುರಿಸಲಿದೆ.
ಕಳೆದ ಪಂದ್ಯಗಳಲ್ಲಿ ಎರಡೂ ತಂಡಗಳು ಪರಸ್ಪರ ವ್ಯತಿರಿಕ್ತ ಫಲಿತಾಂಶಗಳನ್ನು ಪಡೆದಿವೆ. ಬೆಂಗಳೂರು ತಂಡವು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ಸಿ ವಿರುದ್ಧ 1-2 ಅಂತರದಿಂದ ಸೋಲನುಭವಿಸಿದೆ. ಇನ್ನು ಒಂದು ಪಂದ್ಯ ಬಾಕಿ ಉಳಿಸಿಕೊಂಡಿರುವ ಆತಿಥೇಯ ಈಸ್ಟ್ ಬೆಂಗಾಲ್ ತಂಡವು, ಚೆನ್ನೈಯಿನ್ ಎಫ್ಸಿ ವಿರುದ್ಧ ಅವರದ್ದೇ ನೆಲದಲ್ಲಿ (ಜೆಎಲ್ಎನ್ ಕ್ರೀಡಾಂಗಣ) 1-3 ಗೋಲುಗಳ ಜಯ ಸಾಧಿಸುವ ಮೂಲಕ ಈ ಸೀಸನ್ನ ಮೊದಲ ‘ಅವೇ’ (ಎದುರಾಳಿ ಮೈದಾನದಲ್ಲಿನ) ಗೆಲುವನ್ನು ದಾಖಲಿಸಿದೆ.
ಕಳೆದ ವಾರ ಬಿಎಫ್ಸಿ ತಂಡವು ಕೇರಳ ಬ್ಲಾಸ್ಟರ್ಸ್ ಎಫ್ಸಿ ವಿರುದ್ಧ ಸೋಲುವ ಮೂಲಕ ಮೂರು ಪಂದ್ಯಗಳ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದ್ದು, ಈಗ ಮತ್ತೆ ಗೆಲುವಿನ ಹಾದಿಗೆ ಮರಳಲು ತಂಡವು ಉತ್ಸುಕವಾಗಿದೆ. ಇದೇ ವೇಳೆ, ಈಸ್ಟ್ ಬೆಂಗಾಲ್ ಎಫ್ಸಿ ಫೆಬ್ರವರಿ 27 ರಂದು ಜೆಮ್ಶೆಡ್ಪುರ ಎಫ್ಸಿ ವಿರುದ್ಧ ತವರಿನಲ್ಲಿ 1-2 ಅಂತರದಿಂದ ಸೋತ ಬಳಿಕ ಇದುವರೆಗೆ ಸೋಲನ್ನೇ ಕಂಡಿಲ್ಲ. ಆ ಪಂದ್ಯದಲ್ಲಿ ರೇ ತಾಚಿಕಾವಾ 87ನೇ ನಿಮಿಷದಲ್ಲಿ ಹೊಡೆದ ಗೋಲು ಈಸ್ಟ್ ಬೆಂಗಾಲ್ ಸೋಲಿಗೆ ಕಾರಣವಾಗಿತ್ತು. ಅಂದಿನಿಂದ ಸತತ ನಾಲ್ಕು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ಅವರು, ಎರಡು ಜಯ ಮತ್ತು ಎರಡು ಡ್ರಾ ಸಾಧಿಸಿದ್ದಾರೆ.
ಕೋಚ್ ಮುನೋಜ್ ಮಾತನಾಡಿ, “ಅವರ ತಂಡದಲ್ಲಿ ಆಕ್ರಮಣಕಾರಿ ಆಟಗಾರರು ಹೆಚ್ಚಿದ್ದಾರೆ, ಅದಕ್ಕಾಗಿಯೇ ಅವರು ಈ ಸೀಸನ್ನಲ್ಲಿ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿದ್ದಾರೆ. ನಾಳೆಯ ಪಂದ್ಯವು ಚೆಂಡಿನ ಮೇಲಿನ ಹಿಡಿತ ಮತ್ತು ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸುವಲ್ಲಿ ಉತ್ತಮ ಸ್ಪರ್ಧೆಯಿಂದ ಕೂಡಿರಲಿದ್ದು, ಪಂದ್ಯದ ಫಲಿತಾಂಶ ಅಲ್ಲಿಯೇ ನಿರ್ಧಾರವಾಗಬಹುದು,” ಎಂದಿದ್ದಾರೆ.
ಕೋಲ್ಕತ್ತಾದಲ್ಲಿ ಆಡುವ ಬಗ್ಗೆ ಮಾತನಾಡಿದ ಮಿಡ್ಫೀಲ್ಡರ್ ಸುರೇಶ್ ಸಿಂಗ್ ವಾಂಗ್ಜಾಮ್, “ಖಂಡಿತವಾಗಿಯೂ ಅಲ್ಲಿ ಆಡುವುದು ಕಷ್ಟ, ಆದರೆ ಅದೇ ಸಮಯದಲ್ಲಿ ಅದು ರೋಮಾಂಚನಕಾರವಾಗಿರುತ್ತದೆ. ಏಕೆಂದರೆ ಅಲ್ಲಿ ನಮ್ಮ ಆಟ ನೋಡಲು ಸಾಕಷ್ಟು ಜನರಿದ್ದಾರೆ. ನಾವು ಒತ್ತಡವನ್ನು ಬದಿಗಿಟ್ಟು ನಮ್ಮ ಯೋಜನೆಗೆ ಬದ್ಧರಾಗಿ ಆಡಿದರೆ, ನಾಳೆ ಉತ್ತಮ ಫಲಿತಾಂಶ ಬರುವ ಭರವಸೆ ನನಗಿದೆ,” ಎಂದರು.
ಕಳೆದ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದಿದ್ದ ಬ್ರಿಯಾನ್ ಸ್ಯಾಂಚೆಜ್ ಈಗ ಪ್ರವಾಸಿ ತಂಡಕ್ಕೆ ಲಭ್ಯವಿರಲಿದ್ದಾರೆ. ಅವರು ಪಡೆದ ಕಾರ್ಡ್ ಕುರಿತು ಕ್ಲಬ್ ಸಲ್ಲಿಸಿದ್ದ ಮೇಲ್ಮನವಿಯನ್ನು ಲೀಗ್ ಅಂಗೀಕರಿಸಿದ್ದು, ಅವರ ಅಮಾನತು ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ.



