ಕಾಂಗ್ರೆಸ್ಸಿಗರ ಭಾರತ್ ಜೋಡೊ ರಂಜನೆಗೆ ಸೀಮಿತ: ನಳೀನ್ ಕುಮಾರ್ ಕಟೀಲ್

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: “ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ; ಅದು ಚೇತರಿಕೆ ಕಾಣಲಾರದು ಎಂಬುದನ್ನು ಮನಗಂಡ ನಾಯಕರನೇಕರು ಒಬ್ಬೊಬ್ಬರಾಗಿ ಈಗಾಗಲೇ ಆ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಕಾಂಗ್ರೆಸ್ ತೊರೆಯುವ ನಾಯಕರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಜೋಡೋ ಮಾಡಬೇಕಿದ್ದ ರಾಹುಲ್ ಗಾಂಧಿಯವರು ತಮ್ಮ ಮುತ್ತಾತ ನೆಹರೂ ಅವರು ದೇಶವನ್ನು ಇಬ್ಭಾಗ ಮಾಡಿದ್ದನ್ನು ಮರೆತಿದ್ದಾರೆ.” ಹೀಗೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬೆಂಗಳೂರಿನಲ್ಲಿ ಟೀಕಿಸಿದ್ದಾರೆ.
ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದು ಮಾಡಿ ದೇಶ ಜೋಡಿಸುವ ಕಾರ್ಯ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ ಎಂದೂ ಅವರು ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಎರಡು ಬಣ:
ರಾಹುಲ್ ಗಾಂಧಿಯವರು ಭಾರತ್ ಜೋಡೋ ಮೂಲಕ ಕರ್ನಾಟಕಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೇ ಇಲ್ಲಿನ ಕಾಂಗ್ರೆಸ್ ಮುಖಂಡರು ಎರಡು ತಂಡಗಳಾಗಿ ಸ್ವಾಗತ ಮಾಡಿದ್ದಾರೆ. ಮುಖ್ಯಮಂತ್ರಿ ಕುರ್ಚಿಯ ಹಗಲುಕನಸು ಕಾಣುವ ಸಿದ್ದರಾಮಯ್ಯ ಒಂದೆಡೆ ಸ್ವಾಗತ ಕೋರಿದರೆ, ಜೈಲಿನತ್ತ ಮುಖ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೊಂದೆಡೆ ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದ್ದಾರೆ. ಇದು ಕಾಂಗ್ರೆಸ್ ಭಿನ್ನಮತಕ್ಕೆ ಸ್ಪಷ್ಟ ನಿದರ್ಶನ. ಇದನ್ನು ಜನತೆ ಗಮನಿಸಿದ್ದಾರೆ ಎಂದರು.
ಅಂಬೇಡ್ಕರ್ ಅವರಿಗೆ ಗೌರವ ಸಂದಿದ್ದು ಬಿಜೆಪಿಯಿಂದ:
ಸಂವಿಧಾನದ ಕರ್ತೃ, ಮಹಾನ್ ನಾಯಕ ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರಿಗೆ ಸದಾ ಅನ್ಯಾಯ- ಅವಹೇಳನ ಮಾಡಿದ ಪಕ್ಷ ಕಾಂಗ್ರೆಸ್. ಅವರನ್ನು ಕೇವಲ ಮತಬ್ಯಾಂಕಾಗಿ ಅದು ಬಳಸಿಕೊಂಡಿತ್ತು. ಆದರೆ, ಬಿಜೆಪಿ ಅವರ ಪ್ರಮುಖ ಸ್ಥಳಗಳನ್ನು ಪಂಚಕ್ಷೇತ್ರಗಳನ್ನಾಗಿ ಅಭಿವೃದ್ಧಿ ಪಡಿಸಿದೆ. ರಾಜ್ಯದಲ್ಲೂ ಅವರು ಭೇಟಿ ಕೊಟ್ಟ ಸ್ಥಳಗಳನ್ನು ಅಭಿವೃದ್ಧಿ ಪಡಿಸಲು ಬಿಜೆಪಿಯ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರಕಾರ ಮುಂದಾಗಿದೆ ಎಂದು ಅವರು ವಿವರಿಸಿದ್ದಾರೆ.
ಕಾಂಗ್ರೆಸ್ಸಿಗರು ಭಾರತ್ ಜೋಡೋದಂಥ ನಾಟಕದ ಮೂಲಕ ಜನರಿಗೆ ರಂಜನೆಯನ್ನಷ್ಟೇ ನೀಡಬಲ್ಲರು. 2023ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗೆದ್ದು ರಾಜ್ಯವನ್ನು ‘ಕಾಂಗ್ರೆಸ್ ಪಾರ್ಟಿ ಎಟಿಎಂ’ ಮಾಡಿಕೊಳ್ಳಲು ಕಾಂಗ್ರೆಸ್‍ನ ನಕಲಿ ಗಾಂಧಿ ಕುಟುಂಬ ಯೋಚಿಸಿದೆ. ಅದು ಈಡೇರುವ ಸಾಧ್ಯತೆ ಇಲ್ಲ ಎಂಬುದು ಅರಿವಾದ ಬಳಿಕ ಡಿಕೆ ಶಿವಕುಮಾರ್- ಸಿದ್ದರಾಮಯ್ಯರವರು ಬಿಜೆಪಿ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ಅವಧಿಯ ಶಿಕ್ಷಕರ ನೇಮಕಾತಿ ಹಗರಣ, ಪೊಲೀಸ್ ಇಲಾಖೆಯ ನೇಮಕಾತಿ ಹಗರಣ, ದಿಂಬು- ಹಾಸಿಗೆ ಖರೀದಿ ಹಗರಣ, ಅರ್ಕಾವತಿ ರೀಡೂ ಹಗರಣಗಳ ತನಿಖೆ ಸಾಧ್ಯತೆಯ ವಿಚಾರ ತಿಳಿದ ಬಳಿಕ ಸಿದ್ದರಾಮಯ್ಯರಿಗೆ ನಿದ್ರೆ ಬರುತ್ತಿಲ್ಲ; ಜೈಲುರಾಮಯ್ಯ ಆಗುವ ಆತಂಕ ಅವರನ್ನು ಕಾಡುತ್ತಿದೆ. ‘ತಾನು ಕಳ್ಳ ಪರರನ್ನು ನಂಬಲಾರ’ ಎಂಬ ಸ್ಥಿತಿ ಈ ಮುಖಂಡರದು ಎಂದು ನವೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.
ಪಿಎಫ್‍ಐ ಮತ್ತು ಎಸ್‍ಡಿಪಿಐಯ ಸಾವಿರಾರು ಮುಖಂಡರು ಮತ್ತು ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿದ್ದ ಸಿದ್ದರಾಮಯ್ಯರ ಹಿಂದಿನ ಸರಕಾರವು ಜನರಿಗೆ ‘ಪಿಎಫ್‍ಐ ಭಯೋತ್ಪಾದನಾ ಭಾಗ್ಯ’ ನೀಡಿತ್ತು. ಪಿಎಫ್‍ಐ ಮತ್ತು ಸಹ ಸಂಘಟನೆಗಳ ನಿಷೇಧ ಸಿದ್ದರಾಮಣ್ಣನಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಓಲೈಕೆ, ತುಷ್ಟೀಕರಣ ಮತ್ತು ಹಿಂದೂ ವಿರೋಧಿ ರಾಜಕಾರಣ ಮಾಡುತ್ತಲೇ ಬಂದಿರುವ ಸಿದ್ದರಾಮಣ್ಣ ಮತ್ತು ಡಿ.ಕೆ.ಶಿವಕುಮಾರ್ ಕುತಂತ್ರಗಳು ಮುಂದಿನ ಚುನಾವಣೆಯಲ್ಲಿ ಫಲ ಕೊಡುವುದಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!